ಕಾಡು ಜನರ ಬೇಡು ಹಬ್ಬ
ಗೋಣಿಕೊಪ್ಪ: ಬೈಗುಳಗಳ ಸಂಭ್ರಮವಾಗಿ ಆದಿವಾಸಿ ಬುಡಕಟ್ಟು ಜನರು ಅಶ್ಲೀಲ ಶಬ್ದಗಳ ಮೂಲಕ ದೇವರನ್ನು ಸ್ತುತಿಸುವ ಬೇಡು ಹಬ್ಬ ಮೇ 27 28ರಂದು ನಡೆಯಿತು.
ಬದುಕಿನ ಸಂಕಷ್ಟಗಳ ಪರಿಹಾರಕ್ಕಾಗಿ ಭಕ್ತರು ದೇವರ ಕಾಡಿನಲ್ಲಿನೆಲೆಸಿರುವ ಭದ್ರಕಾಳಿ ಅಯ್ಯಪ್ಪ ದೇವರನ್ನು, ಪ್ರಾರ್ಥಿಸುವ ‘ಬೇಡು ಹಬ್ಬ’ ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಆಚರಣೆ.
ಮೈತುಂಬ ಸೊಪ್ಪು, ತರಕಾರಿಗಳು, ಹರಿದ ಬಟ್ಟೆಗಳನ್ನು ಹಾಕಿಕೊಂಡು, ಮುಖ -ಮೈಗೆ ಮಸಿ ಬಳಿದುಕೊಂಡು ವಿಚಿತ್ರ ವೇಷಗಳನ್ನು ಹಾಕಿಕೊಳ್ಳುತ್ತಾರೆ. ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳ ಮೇಳ ಮಾಡಿಕೊಂಡು ಕುಣಿಯುತ್ತಾ ಎದುರಿಗೆ ಸಿಕ್ಕಿದವರಿಗೆಲ್ಲಅಶ್ಲೀಲವಾಗಿ ಬೈಯುತ್ತಾ ಹಣ ಬೇಡುತ್ತಾರೆ. ಹೀಗೆ ಎರಡು ದಿನ ಬೇಡಿ ಬಂದ ಹಣವನ್ನು ದೇವರಪುರದಲ್ಲಿರುವ ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕುತ್ತಾರೆ.
ಈ ಆಚರಣೆಯು ದೇಗುಲದ ಪೂಜಾರಿ, ಊರಿನ ಹಿರಿಯರು ಹಾಗೂ ಭಕ್ತ ವೇಷಧಾರಿಗಳಿಂದ ನಡೆಯುತ್ತದೆ. ಭಕ್ತರು ಕಾಡಿನಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ಹರಕೆ, ಕಾಣಿಕೆಗಳನ್ನು ಭದ್ರಕಾಳಿ ದೇವರ ಮುಂದಿಟ್ಟು, ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬವು ಮುಗಿಯುತ್ತದೆ.
ಈ ಬೇಡು ಹಬ್ಬವನ್ನು ಸಣ್ಣುವಂಡ ಕುಟುಂಬಸ್ಥರು ಮುಖ್ಯಸ್ಥರಾಗಿ ನಡೆಸುತ್ತಾ ಬರುತ್ತಿದ್ದಾರೆ. ಇವರೊಂದಿಗೆ ಊರಿನ ಇತರ ಕುಟುಂಬದವರಾದ ಕಳ್ಳಿಚಂಡ, ಮನೆಯಪಂಡ, ಚಕ್ಕೇರ, ಅಜ್ಜಿನಿಕಂಡ, ಕಂಜಿತಂಡ ಕುಟುಂಬಸ್ಥರೂ ಸಹಕಾರ ನೀಡುತ್ತಾರೆ.
ಫೋಟೋ: 25 ಜಿ.ಕೆ.ಎಲ್ 01, 02: ಕುಂಡೆ ಹಬ್ಬದ ಸಂಭ್ರಮ (ಸಂಗ್ರಹ ಚಿತ್ರ)

