ಮದ್ದಿಗೊದಗುವ ಬೆತ್ತ
-----
ಡಾ. ಸತ್ಯ
--------------
ಶತಮಾನದ ಹಿಂದಿನ ಶಾಲೆಗಳು. ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿದ್ದುದು ತುಂಟ ಹಾಗೂ ಆಲಸಿ ಮಕ್ಕಳ ಅಂಗೈಗೆ ರಪ ರಪನೆ ಬೀಳುತ್ತಿದ್ದ ಬೆತ್ತದ ಚಡಿಯೇಟು. ಗಾದೆ ಮಾತಿದೆ. ಕೋಣನಿಗೆ ದೊಣ್ಣೆ ಪೆಟ್ಟು. ಜಾಣನಿಗೆ ಮಾತಿನ ಪೆಟ್ಟು! ಜಾಣರು ಬೆಳೆಸಿದ ಓಟದ ಕೋಣಗಳು ಮತ್ತೆ ಮತ್ತೆ ಬೆತ್ತದ ಏಟು ತಿನ್ನುತ್ತಲೇ ಕಂಬಳದ ಕ್ರೀಡೆಯಲ್ಲಿಪಾಲುಗೊಳ್ಳುವವು. ಶಾಲಾ ತರಗತಿಯ ಬೆತ್ತದ ಮಹಿಮೆಯು ಭೂತಾರಾಧನೆಯ, ಕಂಬಳದೋಟಕ್ಕೆ ಮಾತ್ರ ಸೀಮಿತ ಅಲ್ಲ. ಕುಕ್ಕೆಯ ಬ್ರಹ್ಮ ರಥದ ಕೊಂಡಿಗೆ ಒದಗುತ್ತದೆ. ರಥೋತ್ಸವದ ದೇವರ ರಥ ಎಳೆಯಲು ಬಳಕೆಯಾಗುತ್ತದೆ. ರಥ ಎಳೆದ ಬೆತ್ತದ ತುಣುಕುಗಳನ್ನು ಮನೆ ಮನೆಗೆ ಭಕ್ತರು ಒಯ್ಯುವರು. ಹಾವು, ಚೇಳು, ವಿಷ ಜಂತು ಕಡಿತದ ಮದ್ದು ರೂಪದಲ್ಲಿತೇದು ಹಚ್ಚುವರು. ಹೀಗೆ ಬೆತ್ತದ ವಿಷಹರ ಗುಣ ಮೌಖಿಕ ಪರಂಪರೆಯಲ್ಲಿಉಳಿದಿದೆ.
ವೇತ್ರ ಎಂಬ ಸಂಸ್ಕೃತ ಹೆಸರಿನಡಿ ಚರಕ ಮತ್ತು ಸುಶ್ರುತ ಸಂಹಿತೆಗಳಲ್ಲಿಬಣ್ಣನೆಗೊಂಡಿದೆ. ಸದಾ ಹಸಿರು ಕಾಡಿನ ನೀರು ಝರಿಗಳ ಆಸುಪಾಸಿನಲ್ಲಿಬೆಳೆಯುವ ಸಸ್ಯ ಸಂಪತ್ತು ಇದು. ಕಲ್ಲುಬಂಡೆಗಳ ಸಂದಿಯಲ್ಲಿಬಿದ್ದ ಬೀಜವು ಕ್ರಮೇಣ ಆಸರೆ ಮರ ಅಪ್ಪಿಕೊಳ್ಳುತ್ತಾ ಗಗನ ಚುಂಬಿಯಾಗಬಲ್ಲಮಹಾ ಮುಳ್ಳು ಬಳ್ಳಿ. ಅಡಿಕೆ ಮರದ ಎಲೆಯಾಕಾರದ ಸಂಯುಕ್ತ ಪತ್ರವನ್ನು ಹೊಂದಿದೆ. ಇದರ ಚಿಗುರೆಲೆಯಿಂದ ಗೊಜ್ಜು, ತಂಬುಳಿಯಂತಹ ಆಹಾರ ತಯಾರಿಕೆಗೆ ಬಳಸಬಹುದು. ಶೀತಗುಣ, ಒಗರು ರುಚಿ ಹೊಂದಿದೆ. ಬೆತ್ತವನ್ನು ಅರೆದು ಲೇಪಿಸುವ ಮೂಲ ಮಾಹಿತಿ ಚರಕ ಸಂಹಿತೆಯಲ್ಲಿದೆ. ಮೌಖಿಕ ಪರಂಪರೆಯ ಈ ವಿಧಾನಕ್ಕೆ ಸಹಸ್ರಾರು ವರುಷಗಳ ಹಿನ್ನಲೆ ಇದೆ.
ಬೆತ್ತದಲ್ಲಿಹಲವು ಪ್ರಭೇದಗಳಿವೆ. ಕೆಲವು ವಿಷಕಾರಿ ಗುಣದವುಗಳೂ ಇರಬಹುದು. ಕೆಲಮಸ್ ರೊಟಾಂಗ್ ದ್ವಿನಾಮದ ಬೆತ್ತದ ಚಿಗುರು ಪಲ್ಯ ಮಾಡಿ ಸವಿಯುವುದರಿಂದ ಸಿಗುವ ಔಷಧದ ಬಗ್ಗೆ ‘ಸಹಸ್ರಾರ್ಧ ವೃಕ್ಷಾದಿ ವರ್ಣನಂ’ ಗ್ರಂಥ(19ನೆ ಶತಮಾನ) ಪ್ರಸ್ತಾಪಿಸಿದೆ.
-------
ಇದು ಬೇಡ
ಬೆಳ್ಳಿಯ ಹಿಡಿಕೆಯಿಂದ ಸಿಂಗರಿಸಿದ ನಾಗರ ಬೆತ್ತದ ಏಟು ತಿಂದು ಮರಣಿಸಿದ ಮಾರ್ಮಿಕ ಕತೆಯೊಂದು ನೆನಪಾಗುತ್ತದೆ. ಹತ್ತೊಂಬತ್ತನೆ ಶತಮಾನದ ಆಂಗ್ಲಕುದುರೆ ಸವಾರನೊಬ್ಬ ಕಾಡಿನ ಹಾದಿಯಲ್ಲಿಸಾಗುತ್ತಿದ್ದ. ಆತನು ಆಗ ತಾನೇ ಮದುವೆಯಾದ ಕಿಶೋರ ದಂಪತಿಗಳಿಗೆ ಎದುರಾಗುತ್ತಾನೆ. ಪುಟಾಣಿ ವಧು ಅಡಗಿ ಕುಳಿತುಕೊಳ್ಳುತ್ತರೆ. ಬೆಳ್ಳಿ ಕಟ್ಟಿನ ಬೆತ್ತ ಹಿಡಿದ ಕಿಶೋರ ಕಾಲು ಹಾದಿಯಲ್ಲಿಎದುರಾದ ಸಿಪಾಯಿಗೆ ಹೆಮ್ಮೆಯಿಂದ ವಂದಿಸಿ ಬದಿಗೆ ಸರಿದು ನಿಲ್ಲುವನು. ಆಂಗ್ಲಸಿಪಾಯಿಯು ಆ ಬೆತ್ತವನ್ನು ಕೊಡು ಎಂದು ಹುಡುಗನಿಗೆ ಹೇಳುವನು. ಒಲ್ಲೆಎಂದ ಹುಡುಗನಿಗೆ ಕುದುರೆಯಿಂದ ಇಳಿದ ಸಿಪಾಯಿ ಬೆತ್ತ ಕಸಿದುಕೊಂಡನು. ಅದೇ ಬೆತ್ತದಿಂದ ಉರುಳುರುಳಿಸಿ ಹೊಡೆದು ಬೆತ್ತ ಹಿಡಿದು ನಡೆದನು. ಉಸಿರು ಬಿಗಿ ಹಿಡಿದು ಅವಿತಿದ್ದ ಕಿಶೋರಿಯ ಕಣ್ಣಮುಂದೆಯೆ ಮಡಿದ ಪತಿಯ ರಕ್ತ ಸಿಕ್ತ ದೇಹದ ಕತೆ. ಇದು ಅಂದಿನ ಅಂಗ್ಲರ ಕ್ರೌರ್ಯದ ಒಂದು ಮುಖ. ಕತೆಗಾರ ಸೇಡಿಯಾಪು ಕೃಷ್ಣ ಭಟ್ ಬರೆದ ಈ ಕಥೆ ಕೇವಲ ಕತೆಯಲ್ಲ. ನಡೆದ ನಿಜ ಸಂಗತಿ. ಶಸ್ತ್ರ ಮತ್ತು ಶಾಸ್ತ್ರ ಅಪಾತ್ರರ ಕೈಗೆ ಹೋದರೆ ಕೊಲ್ಲುತ್ತದೆ. ಸಪಾತ್ರರಿಗೆ ಸಂದರೆ ಕಾಯುತ್ತದೆ. ಬೆತ್ತದ ಉಳಿವು ಸಹ ಇಂದು ನಮ್ಮ ಕೈಯಲ್ಲಿದೆ.

