ತಿರುವನಂತಪುರಂ: ಶ್ರೀಮಂತ ದೇಗುಲಗಳಲ್ಲಿಒಂದಾದ ಕೇರಳದ ಪದ್ಮನಾಭಸ್ವಾಮಿ ದೇವಾಲಯದಿಂದ ಚಿನ್ನ ಮತ್ತು ವಜ್ರದ ಅಮೂಲ್ಯ ಆಭರಣಗಳು ನಾಪತ್ತೆಯಾಗಿವೆ. ಕೇರಳ ಪೊಲೀಸ್ ಮಹಾನಿರ್ದೇಶಕ ಗೃಹ ಕಾರ್ಯದರ್ಶಿಗೆ ಈ ಬಗ್ಗೆ ರಹಸ್ಯ ವರದಿ ಸಲ್ಲಿಸಿದ್ದಾರೆ. ದೇವಾಲಯದ ಒಟ್ಟು ದಾಸ್ತಾನು ಪರಿಶೀಲನೆ ನಡೆಸಿದ ಮೇಲೆ 78 ಗ್ರಾಂ ಚಿನ್ನದ ಆಭರಣಗಳು ಮತ್ತು ಅತ್ಯಂತ ಬೆಲೆಬಾಳುವ ‘ವೈರಮ್ ನಾಮ’ ಎಂದು ಕರೆಯಲ್ಪಡುವ ವಜ್ರಖಚಿತ ತುಂಡು ಕಾಣೆಯಾಗಿರುವುದಾಗಿ ವರದಿಯಲ್ಲಿಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ‘ವೈರಮ್ ನಾಮ’ವನ್ನು ದುರಸ್ತಿಗಾಗಿ ಕೆಲ ತಿಂಗಳ ಹಿಂದೆ ಹೊರಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಅದನ್ನು ಮರಳಿ ತರಲಾಗಿಲ್ಲ. ಅದೇ ರೀತಿ, ಸುಮಾರು ಆರು ತಿಂಗಳ ಹಿಂದೆ ನಿರ್ವಹಣೆಗಾಗಿ ಕಳುಹಿಸಲಾಗಿದ್ದ ಚಿನ್ನದ ದೀಪವೂ ಕಣ್ಮರೆಯಾಗಿದೆ ಎನ್ನಲಾಗಿದೆ. ದೇವಾಲಯದ ಅಸ್ತಿತ್ವದಲ್ಲಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಡಿಜಿಪಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕೆಲ ಶಿಫಾರಸುಗಳನ್ನು ಮಾಡಿದ್ದಾರೆ.
---

