ಅರೇಹಳ್ಳಿ: ಯಾರೂ ಇಲ್ಲದೇ ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳವು ಮಾಡಿರುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಪಟ್ಟಣದ ರಾಮನಗರದಲ್ಲಿನಡೆದಿದೆ.
ರಾಮನಗರ ನಿವಾಸಿ ಮಂಜಪ್ಪ ಹಾಗೂ ಗವಿಯಪ್ಪ ಮನೆಯಲ್ಲಿಕಳವು ಪ್ರಕರಣ ನಡೆದಿದೆ. ಮಂಜಪ್ಪ ಹಾಗೂ ಗವಿಯಪ್ಪ ತನ್ನ ಕುಟುಂಬದೊಂದಿಗೆ ಮಂಗಳೂರಿನ ಗುರುಪುರ ಕೈಕಂಬ ಗ್ರಾಮಕ್ಕೆ ಸಹೋದರನ ನಿಧನರಾದ ಹಿನ್ನೆಲೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಗವಿಯಪ್ಪ ಎಂಬುವವರ ಮನೆಯ ಹಿಂಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಮಂಜಪ್ಪ ಎಂಬುವವರ ಮನೆಯಲ್ಲಿಯೂ ಕಳ್ಳತನ ನಡೆದಿದ್ದು, ಮನೆಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಲಕ್ಷಾಂತರ ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಮನೆಗೆ ವಾಪಸ್ ಬಂದ ನಂತರ ಕಳವು ಪ್ರಕರಣ ತಿಳಿದಿದೆ.ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.