ಸಂಭ್ರಮದ ಹಿಂದು ಮಹಾ ಶಕ್ತಿ ಗಣಪತಿ ಉತ್ಸವ

Contributed bydhanushkulal9@gmail.com|Vijaya Karnataka
attractive celebration with performances hindu mahashakti ganapati utsav in shaktinagar
ಶಕ್ತಿನಗರ ಗಣೇಶೋತ್ಸವ-2026 ಸಂಪನ್ನ

ವಿಕ ಸುದ್ದಿಲೋಕ ಮಂಗಳೂರು
ಶ್ರೀಗುರು ದತ್ತಾತ್ರೇಯ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ, ಶ್ರೀವೈದ್ಯನಾಥ ಶಾಖೆ ಶಕ್ತಿನಗರ ಸಹಕಾರದೊಂದಿಗೆ ಪ್ರಥಮ ವರ್ಷದ ಹಿಂದು ಮಹಾ ಶಕ್ತಿ ಗಣಪತಿ ಉತ್ಸವ ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರ ಬಳಿಯಿರುವ ಛತ್ರಪತಿ ಶಿವಾಜಿ ವೃತ್ತದ ಬಳಿ ನಡೆಯಿತು.

ಸೋಮವಾರ ಬೆಳಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿಗಣಪತಿ ಬಿಂಬ ಪ್ರತಿಷ್ಠೆ ಹಾಗೂ ಗಣಹೋಮ ನೆರವೇರಿತು. ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಮೂರು ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಿತು. ಸಂಜೆ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭೆಯಲ್ಲಿಉದ್ಯಮಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ದಿಕ್ಸೂಚಿ ಭಾಷಣ ಮಾಡಿದರು. ಗಣೇಶ ಚತುರ್ಥಿ ಪ್ರಯುಕ್ತ ಪ್ರತಿವರ್ಷ ಆಯೋಜಿಸಲಾಗುವ ಚಿತ್ರಕಲಾ ಸ್ಪರ್ಧೆಯಲ್ಲಿವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರ ಶಕ್ತಿನಗರದ ಮಾತಾಜಿ ರಮಾದೇವಿ, ಶಕ್ತಿನಗರ ವಿಶ್ವ ಹಿಂದೂ ಪರಿಷತ್ ಶ್ರೀ ವೈದ್ಯನಾಥ ಶಾಖೆ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಮಾತೃಶಕ್ತಿ ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಸಹ ಕಾರ್ಯದರ್ಶಿ ಮಾಲತಿ ಸ್ವಾಗತಿಸಿದರು. ಮಾತೃಶಕ್ತಿ ದುರ್ಗಾವಾಹಿನಿ ಕಾರ್ಯಕರ್ತೆ ಸುಮಲತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸನ್ನಿಧಿ ಅಮೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಧನುಷ್ ಕುಲಾಲ್ ಹಾಗೂ ಶಕೀಲಾ ಕಾವ ಕಾರ್ಯಕ್ರಮ ಸಂಯೋಜಿಸಿದರು.

ಉತ್ಸವದ ಅಂಗವಾಗಿ ನಡೆದ ಭವ್ಯ ಶೋಭಾಯಾತ್ರೆಯಲ್ಲಿಬಾಲ ಸಂಸ್ಕಾರ ಕೇಂದ್ರದ ಮಕ್ಕಳ ಕುಣಿತ ಭಜನೆ, ಚೆಂಡೆ ಸಿಂಗಾರಿ ಮೇಳ ತಂಡದೊಂದಿಗೆ ಗಣಪತಿ ಮೂರ್ತಿಯನ್ನು ಇರಿಸಲಾಗಿದ್ದ ಟ್ಯಾಬ್ಲೋ ಸಾಗಿತು. ಶಕ್ತಿನಗರದ ಛತ್ರಪತಿ ಶಿವಾಜಿ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ಬಿಕರ್ನಕಟ್ಟೆ, ಕೈಕಂಬ, ಮರೋಳಿ ಮಾರ್ಗವಾಗಿ ಪಡೀಲ್ ಬೈರಾಡಿ ಕೆರೆಗೆ ತಲುಪಿ, ಶ್ರೀ ಮಹಾಗಣಪತಿ ದೇವರ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ ಜಲಸ್ತಂಭನಗೊಳಿಸಲಾಯಿತು.

ಫೊಟೋ: 16ಸೆ-ಗಣಪತಿ

ಪ್ರಥಮ ವರ್ಷದ ಪೂಜಿತ ಗಣಪ

16ಸೆ-ಸಭಾ

ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಲಾಯಿತು.