Discussion With Foreign Investors By Mb Patil Semiconductor India 2026 Summit
ವಿದೇಶಿ ಹೂಡಿಕೆದಾರರೊಂದಿಗೆ ಎಂಬಿಪಿ ಚರ್ಚೆ
Contributed by: Keerthi Prasad|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ಹೊಸದಿಲ್ಲಿನಡೆದಿರುವ ಮಹತ್ವಾಕಾಂಕ್ಷಿ ‘ಸೆಮಿಕಾನ್ ಇಂಡಿಯಾ-2026’ ಸಮಾವೇಶದ ಮೊದಲ ದಿನವಾದ ಗುರುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಲೇಷಿಯಾ ಮತ್ತು ನೆದರ್ ಲ್ಯಾಂಡ್ಸ್ ದೇಶಗಳ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ್ದಾರೆ.ಹಾಗೆಯೇ, ಯೂಲರ್ ಮೋಟಾರ್ಸ್, ನೆಕ್ ಸ್ಪೀರಿಯಾ, ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ , ಎರಿಕ್ಸನ್ , ಸಿ.ಜಿ.ಸೆಮಿ, ಆಕ್ಸಿರೋ ಮತ್ತು ಲಿಂಡೆ ಕಂಪನಿಗಳೊಂದಿಗೂ ಅವರು ವಿಸ್ತೃತವಾಗಿ ವಿಚಾರ ವಿನಿಮಯ ಕೈಗೊಂಡಿದ್ದಾರೆ.
ಬಂಡವಾಳ ಆಕರ್ಷಣೆ ಉದ್ದೇಶದಿಂದಲೇ ಎಂ.ಬಿ.ಪಾಟೀಲ್ ಅವರು ಕಳೆದ ವಾರ ಫ್ರಾನ್ಸ್ ಮತ್ತು ನೆದರ್ ಲ್ಯಾಂಡ್ಸ್ ಗೆ ಐದು ದಿನಗಳ ಪ್ರವಾಸ ಕೈಗೊಂಡು ರೋಡ್ ಶೋ ಮತ್ತು ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಅವರೀಗ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿಪಾಲ್ಗೊಳ್ಳಲು ದಿಲ್ಲಿಗೆ ತೆರಳಿದ್ದು, ಶುಕ್ರವಾರವೂ ಹಲವು ಕಂಪನಿಗಳೊಂದಿಗೆ ಅವರ ಮಾತುಕತೆ ನಿಗದಿಯಾಗಿದೆ.
‘‘ದಿಲ್ಲಿಮೂಲದ ಯೂಲರ್ ಮೋಟಾರ್ಸ್ ವಿದ್ಯುತ್ ಚಾಲಿತ ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ರಾಜ್ಯದಲ್ಲಿತಯಾರಿಸುವ ಯೋಜನೆ ಮುಂದಿಟ್ಟಿದೆ. ಅದಕ್ಕೆ ವಿಜಯಪುರ ಸೂಕ್ತ ಸ್ಥಳವೆಂದು ಹೇಳಿದ್ದು, ಇದು ಈಡೇರಿದರೆ ಸರಕು ಸಾಗಣೆ ಮತ್ತು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ವಾಣಿಜ್ಯೋದ್ದೇಶದ ಸಂಚಾರ ಎರಡೂ ಸುಗಮವಾಗಲಿವೆ. ಅಲ್ಲದೆ, ತನ್ನ ಅಗತ್ಯಗಳಿಗೆ ಅನುಗುಣವಾಗಿ ಕೌಶಲಾಭಿವೃದ್ಧಿ ತರಬೇತಿ ಕೊಡಲಿದೆ,’’ ಎಂದು ಸಚಿವರು ತಿಳಿಸಿದ್ದಾರೆ.
‘‘ಸ್ವದೇಶೀಯ ಎಲ್ .ಟಿ.ಫುಡ್ಸ್ ಸಮೂಹವು ಬ್ರ್ಯಾಂಡೆಡ್ ಬಾಸ್ಮತಿ ಅಕ್ಕಿ, ವಿಶೇಷವಾದ ಅಕ್ಕಿ, ಸಾವಯವ ಪದಾರ್ಥಗಳ ವಹಿವಾಟಿಗೆ ಹೆಸರಾಗಿದ್ದು, ರಾಯಚೂರಿನಲ್ಲಿಈಗಾಗಲೇ ತನ್ನ ಘಟಕ ಹೊಂದಿದೆ. ಈಗ ಕಂಪನಿಯು ಭತ್ತ ಬೆಳೆಯುವ ಪ್ರದೇಶದಲ್ಲಿಬಂಡವಾಳ ಹೂಡಿಕೆಗೆ ಮುಂದೆ ಬಂದಿದ್ದು, ನಮ್ಮಲ್ಲಿವಿಶೇಷವಾಗಿ ಬೆಳೆಯುವ ಸೋನಾ ಮಸೂರಿ ಮತ್ತು ಕೋಲಂ ಅಕ್ಕಿಯ ಕಡೆಗೆ ಗಮನ ಹರಿಸಿದೆ. ಇಂತಹ ಯೋಜನೆಯಿಂದ ರೈತರಿಗೆ ಅನುಕೂಲವಾಗುವ ಜತೆಗೆ ಇಳುವರಿ ಹೆಚ್ಚಳದ ಲಾಭ ತಂದುಕೊಡಲಿದೆ,’’ ಎಂದು ತಿಳಿಸಿದ್ದಾರೆ.
ಸ್ಯಾಮ್ ಸಂಗ್ ಕಂಪನಿಯು ರಾಜ್ಯದಲ್ಲಿಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಜತೆಗೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನೆಲೆಯೂರಿದೆ. ಕಂಪನಿಯು ರಾಜ್ಯದಲ್ಲಿತನ್ನ ತಯಾರಿಕಾ ಸ್ಥಾವರವನ್ನು ಸ್ಥಾಪಿಸಬೇಕು ಎನ್ನುವ ವಿಚಾರವನ್ನು ನಾವು ಮುಂದಿಟ್ಟಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಮಾತುಕತೆಯಲ್ಲಿಯೂಲರ್ ಮೋಟಾರ್ಸ್ ಕಂಪನಿಯ ಸಹ ಉಪಾಧ್ಯಕ್ಷ ದಶರಥ್ ಸಿಂಗ್ , ಮೂಲಸೌಕರ್ಯ ವ್ಯವಸ್ಥಾಪಕ ರಜತ್ ಸಜ್ವಾನ್ , ಎಲ್ .ಟಿ.ಫುಡ್ಸ್ ಕಂಪನಿಯ ಸಿಇಒ ವಿವೇಕ್ ಚಂದ್ರ, ಸಿಡಿಒ ಮೋನಿಕಾ ಜಾಗಿಯಾ, ಉಪಾಧ್ಯಕ್ಷೆ ಅನು ಶರ್ಮಾ, ಸ್ಯಾಮ್ ಸಂಗ್ ಕಂಪನಿಯ ನಿರ್ದೇಶಕ ಶರತ್ ಚಂದ್ರ, ಪ್ರಧಾನ ವ್ಯವಸ್ಥಾಪಕ ನಿತಿನ್ ಶರ್ಮ ಭಾಗವಹಿಸಿದ್ದರು.