ಜೆಡಿಎಸ್ ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಉಪ ಸಭಾಪತಿ ಆಗಿದ್ದವರು. ಆದರೆ ಯಾಕೆ ಈ ರೀತಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಕತ್ತೆ ಕಾಯುವುದು, ಕಿತ್ತು ಗುಡ್ಡೆ ಹಾಕುವುದು ಅವರ ಅನುಭವವಿರಬಹುದು. ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಿದರೆ ಒಳ್ಳೆಯದು ಎಂದು ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಕೋನಪ್ಪ ರೆಡ್ಡಿ ಹರಿಹಾಯ್ದರು.ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮಾಜಿ ಉಪ ಸಭಾಪತಿ ಬೇಜವಾಬ್ದಾರಿಯಾಗಿ ಮಾತನಾಡುವುದನ್ನು ನಿಲ್ಲಿಸಲಿ. ಒಕ್ಕಲಿಗರ ಸಂಘ ಮತ್ತು ಆದಿಚುಂಚನಗಿರಿ ಮಠಕ್ಕೆ ಸಂಬಂಧಿಸಿದ ಎಲ್ಲಕೆಲಸಗಳಿಗೂ ತಮ್ಮ ಬೆಂಬಲಿಗರ ಮೂಲಕ ಆಕ್ಷೇಪಣೆಗಳನ್ನು ಮಾಡಿಸಿ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ದಮ್ಮಿದ್ದರೆ ಚಿಂತಾಮಣಿಯಲ್ಲಿರುವ ಹಾಸ್ಟೆಲ್ ಅನ್ನು ಅಲ್ಲಿಯೇ ಕಟ್ಟಿ ತೋರಿಸಲಿ ಎಂದು ಕೃಷ್ಣಾರೆಡ್ಡಿ ಸವಾಲು ಹಾಕಿದ್ದಕ್ಕೆ ತಿರುಗೇಟು ನೀಡಿದ ಅವರು, ಟ್ರಸ್ಟ್ ನಿಯಮಗಳೇ ಬೇರೆ, ಸೊಸೈಟಿ ನಿಯಮಗಳೇ ಬೇರೆ. ಒಂದರ ಆಡಳಿತದಲ್ಲಿಇನ್ನೊಂದು ಹಸ್ತಕ್ಷೇಪ ಮಾಡಲು ಅಥವಾ ಪ್ರಶ್ನಿಸಲು ಕಾನೂನಿನಲ್ಲಿಅವಕಾಶವಿಲ್ಲ. ರಾಜ್ಯ ಒಕ್ಕಲಿಗರ ಸಂಘ ಒಂದೇ ಒಂದು ಸಂಘವಾಗಿದ್ದು, ಅದಕ್ಕೆ ಯಾವುದೇ ಜಿಲ್ಲೆಗಳಲ್ಲೂಅಧಿಕೃತ ಶಾಖೆಗಳಿಲ್ಲ. ಜಿಲ್ಲಾ ಮತ್ತು ತಾಲೂಕು ಒಕ್ಕಲಿಗರ ಸಂಘಗಳು ಸ್ವತಂತ್ರ ಸಂಸ್ಥೆಗಳಾಗಿದ್ದು, ಅವುಗಳಿಗೂ ರಾಜ್ಯ ಒಕ್ಕಲಿಗರ ಸಂಘಕ್ಕೂ ನೇರ ಸಂಬಂಧವಿಲ್ಲಎಂದು ಸ್ಪಷ್ಟಪಡಿಸಿದರು.
ಯಾವುದೇ ಸಂಸ್ಥೆಯನ್ನು ಪ್ರಶ್ನಿಸಬೇಕೆಂದರೆ ಮೊದಲು ಆ ಸಂಸ್ಥೆಯ ಸದಸ್ಯತ್ವ ಹೊಂದಿರಬೇಕು. ಯಾರದ್ದೋ ಜಾಗದಲ್ಲಿನಾವು ಮನೆ ಅಥವಾ ಕಟ್ಟಡ ಕಟ್ಟಲು ಸಾಧ್ಯವೇ? ಕಟ್ಟಿದರೂ ಪ್ಲಾನ್ ಅಪ್ರೂವಲ್ ಅಥವಾ ಲೈಸೆನ್ಸ್ $ ಸಿಗುತ್ತದೆಯೇ? ಕನಿಷ್ಠ ಜ್ಞಾನವಿಲ್ಲದೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಮಾಜಿ ಶಾಸಕರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಚಿಂತಾಮಣಿಯ ಒಕ್ಕಲಿಗರ ಹಾಸ್ಟೆಲ್ ಇತಿಹಾಸ ಉಲ್ಲೇಖಿಸಿದ ಅವರು, 1943ರಲ್ಲಿಎಂಡೋಮೆಂಟ್ ಇಲಾಖೆಯು ಒಕ್ಕಲಿಗರ ವಿದ್ಯಾರ್ಥಿನಿಲಯಕ್ಕಾಗಿ 15 ಟ್ರಸ್ಟ್ ಸದಸ್ಯರಿಗೆ ಜಾಗ ನೀಡಿತ್ತು. ಅಂದಿನ ಶಿಕ್ಷಣ ಸಚಿವರಾದ ಅಪ್ಪಾಜಿಗೌಡರು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ 1953ರಲ್ಲಿಕಟ್ಟಡ ಕಾಮಗಾರಿ ಪೂರ್ಣಗೊಂಡಾಗ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಉದ್ಘಾಟನೆ ಮಾಡಿದ್ದರು ಎಂದು ವಿವರಿಸಿದರು.
ಮಾಜಿ ಶಾಸಕರು ಯಾವುದೇ ಇತಿಹಾಸ ಅರಿಯದೆ ವಿನಾಕರಣ ಎಲ್ಲದ್ದಕ್ಕೂ ಆಕ್ಷೇಪಣೆಗಳನ್ನು ಎತ್ತಿ ಆದಿಚುಂಚನಗಿರಿ ಮಠ ಮತ್ತು ಒಕ್ಕಲಿಗರ ಸಂಘದ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದಾರೆ. ನಾನು ಸಂಘದ ರಾಜ್ಯ ಖಜಾಂಚಿಯಾಗಿದ್ದಾಗ ನೂರಾರು ಕೋಟಿ ಆಸ್ತಿ ಉಳಿಸಿಕೊಟ್ಟಿದ್ದೇನೆ. ಕೋಲಾರದಲ್ಲಿದ್ದ ಜಮೀನು ವಿವಾದ ಬಗೆಹರಿಸಿ ಸಂಘದ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ ಇವರು 10 ವರ್ಷ ಶಾಸಕರಾಗಿದ್ದಾಗ ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದರು.
ನಾನು ಎಲ್ಲಪಕ್ಷದವರ ಜತೆಯೂ ಚೆನ್ನಾಗಿಯೇ ಇದ್ದೇನೆ. ಎಲ್ಲರೂ ನನಗೆ ಬೇಕಾದವರೇ. ರಾಜಕಾರಣವೇ ಬೇರೆ, ವ್ಯವಹಾರವೇ ಬೇರೆ. ಹೀಗಾಗಿ ಮಾಜಿ ಶಾಸಕರು ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಿದರೆ ಒಳ್ಳೆಯದು. ನಮಗೊಂದು ಆ ರೀತಿಯ ಸಂಸ್ಕೃತಿಯಿಲ್ಲ. ವಿನಾಕಾರಣ ಅಡ್ಡಿಪಡಿಸುವುದನ್ನು ಬಿಟ್ಟು ಬಿಡಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿಮುಖಂಡರಾದ ರಘುನಾಥರೆಡ್ಡಿ, ವೆಂಕಟರಮಣಪ್ಪ, ಸುಬ್ಬಾರೆಡ್ಡಿ, ಚಂದ್ರಶೇಖರ ರೆಡ್ಡಿ, ರವೀಂದ್ರ ರೆಡ್ಡಿ ಸೇರಿದಂತೆ ಹಲವರು ಇದ್ದರು.
03ಸಿಬಿಪಿಫೋಟೋ10
ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋನಪ್ಪ ರೆಡ್ಡಿ ಹಾಗೂ ಮುಖಂಡರು.