ಮುಳ್ಳೇರಿಯ: ಇಲ್ಲಿನ ಪೇಟೆಯಲ್ಲಿ ನಡೆದ ಘರ್ಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಡ್ಕ ಗ್ರಾಮ ಪಂ. ಸದಸ್ಯ ಮುಳ್ಳೇರಿಯದ ಷರೀಫ್ (42) ಅವರನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಳ್ಳೇರಿಯ ಪೇಟೆಯ ವ್ಯಾಪಾರಿ ಷರೀಫ್ ಕಾರಡ್ಕ ಗ್ರಾಮ ಪಂಚಾಯಿತಿಯ 12ನೇ ವಾರ್ಡ್ ಬಳಕ್ಕದ ಮುಸ್ಲಿಂ ಲೀಗ್ ಪಂಚಾಯಿತಿ ಸದಸ್ಯ. ಅವರಿಗೆ ನ್ಯಾಯಾಲಯವು ಎರಡು ವಾರದವರೆಗೆÜ ರಿಮಾಂಡ್ ವಿಧಿಸಿದೆ.
ಮಾ.5ಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿತ್ತು. ಮುಳ್ಳೇರಿಯ ಜುಮಾ ಮಸೀದಿಯ ಎದುರು ಒಂದು ಗುಂಪಿನ ಜನರು ಯುವಕರನ್ನು ತಡೆದು ನಿಲ್ಲಿಸಿ ಆಕ್ರಮಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದೂರು ಪೂತಪ್ಪಲದ ಮುಹಮ್ಮದ್ ರೈಸ್ ನೀಡಿದ ದೂರಿನಂತೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದರು.

