ವಿಕ ಕರುನಾಡ ಸ್ವಾದ ಟಾಪ್ 10 ವಿಜೇತರಿಗೆ ಎಕ್ಸೊ ಬಹುಮಾನ
ಲವಲವಿಕೆ ಸುದ್ದಿಲೋಕ
ಬೆಂಗಳೂರಿನ ರಾಜಾಜಿನಗರ ಕೆಎಲ್ ಇ ಕಾಲೇಜ್ ನಲ್ಲಿಭಾನುವಾರ ನಡೆದ ಪ್ರತಿಷ್ಠಿತ ವಿಕ ಕರುನಾಡ ಸ್ವಾದ ಅಡುಗೆ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿಕರುನಾಡಿನ ಕಳೆದುಹೋಗಿರುವ ಖಾದ್ಯ ವಿಶೇಷಗಳನ್ನು ಪರಿಚಯಿಸಿದ ಟಾಪ್ 10 ಸ್ಪರ್ಧಿಗಳಿಗೆ ಎಕ್ಸೊ ವತಿಯಿಂದ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಅಂತಿಮ ಸುತ್ತಿನ ಈ ಸ್ಪರ್ಧೆಯಲ್ಲಿರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಆಯ್ಕೆಯಾಗಿದ್ದ 26 ಸ್ಪರ್ಧಿಗಳ ಪೈಕಿ ಪ್ರಮುಖ ಹತ್ತು ಜನರನ್ನು ತೀರ್ಪುಗಾರರು ಆಯ್ಕೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಅನುಪಮಾ ಶೆಟ್ಟಿ, ಶಿವಮೊಗ್ಗ ಜಿಲ್ಲೆಯ ಸಾಗರದ ಅರ್ಚನಾ ಅನಿಲ್ ಕುರ್ಡೇಕರ್ , ಬೆಳಗಾವಿ ಜಿಲ್ಲೆಯ ಗೋಕಾಕ್ ನ ಶಿಲ್ಪಾ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಅಂಬಿಕಾ ಭಟ್ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸುಪ್ರಿಯಾ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿಜಯಾ ಆರ್ . ನಾಯಕ, ಹಾಸನ ಜಿಲ್ಲೆಯ ಹೊಳೆನರಸೀಪುರದ ಕವಿತಾ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಭಾರತಿ ಸುರೇಶ್ , ಕೋಲಾರ ಜಿಲ್ಲೆಯ ಮುಳಬಾಗಿಲಿನ ಶಶಿಕಲಾ ಬಿ.ಎಸ್ ., ಹಾವೇರಿ ಜಿಲ್ಲೆಯ ಶಿಗ್ಗಾವಿಯ ಹರ್ಷಾ ಶೆಟ್ಟರ್ ಟಾಪ್ 10ನಲ್ಲಿಸ್ಥಾನ ಪಡೆದರು.
ಟಾಪ್ 10 ಸ್ಪರ್ಧಿಗಳಲ್ಲಿಅನುಪಮಾ ಉತ್ತರ ಕರ್ನಾಟಕದ ಕಡ್ಲೆಬೇಳೆ ಮಾದ್ಲಿಸಿಹಿ ಮತ್ತು ಕಟ್ ವಡಾ ತಯಾರಿಸಿ ಗಮನ ಸೆಳೆದರೆ, ಅರ್ಚನಾ ನವಣೆಯ ವೆಜಿಟೇಬಲ್ ದಮ್ ಬಿರಿಯಾನಿ, ಹಲಸಿನಹಣ್ಣಿನ ಕಡುಬು, ನುಗ್ಗೆ ಸೊಪ್ಪಿನ ಚಿಫ್ಸ್ , ಶಿಲ್ಪಾ ಅವರು ಪಾಲಕ್ ರೈಸ್ , ರಾಗಿ ಕೇಕ್ , ಕಚೋರಿ, ಅಂಬಿಕಾ ಕುಚ್ಚಲಕ್ಕಿಯ ಖಾರ ಗಂಜಿ, ಹಲಸಿನಹಣ್ಣಿನ ಬೀಜದ ಪಾಯಸ, ಶರ್ಕರಪೇರಿ, ಸುಪ್ರಿಯಾ ಹುಳಿ ಬುತ್ತಿಯನ್ನ ಸುಟ್ಟಿದ ಶ್ಯಾವಿಗೆ, ಘಾಟಿ ಉಂಡೆ ಪಕೋಡಾ, ವಿಜಯಾ ಅವರು ದಕ್ಷಿಣ ಕರ್ನಾಟಕದ ಪುಂಡಿ, ಕುವಹುಳಿ ಬರ್ಫಿ, ಚಟ್ಟಂಬಡೆ, ಕವಿತಾ ಅನ್ನ ಮತ್ತು ಕಳಲೆ ಸಾಂಬಾರ್ , ಕುಂಬಳಕಾಯಿ ಕಡುಬು, ಭಾರತಿ ಅವರು ಅನ್ನ ಮತ್ತು ಬಾಳೆದಿಂಡಿನ ಮೊಳಕೆ ಹುರಳಿಕಾಳು, ಬೀಟ್ರೂಟ್ ಹಲ್ವಾ, ಶಶಿಕಲಾ ಅವರು ಪೊಂಗಲ್ , ಸಿಹಿ ರಾಗಿ ಶ್ಯಾವಿಗೆ, ಕಡ್ಲೆಹಿಟ್ಟಿನ ಬೋಂಡಾ, ಹರ್ಷಾ ಕಂಚಿಕಾಯಿ ಚಿತ್ರಾನ್ನ, ಸಿಹಿಗುಂಬಳಕಾಯಿ ಗಾರಿಗೆ, ದೊಡ್ಡಪತ್ರೆ ಎಲೆಯ ಬಜ್ಜಿ ತಯಾರಿಸಿ ಸೈ ಅನಿಸಿಕೊಂಡರು.

