ವಿಕ ಸುದ್ದಿಲೋಕ ಮೈಸೂರು ಮಕ್ಕಳು ಮೊಬೈಲ್ ಸಹವಾಸ ತೊರೆದು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಲೇಖಕಿ ಯಶೋಧ ರಾಮಕೃಷ್ಣ ಕಿವಿಮಾತು ಹೇಳಿದರು ವಿಜಯನಗರದ ಮೂರನೇ ಹಂತದಲ್ಲಿರುವ ವಿ.ಕೆ.ಪಬ್ಲಿಕ್ ಸ್ಕೂಲ್ ನಲ್ಲಿನಡೆದ ‘ವಿಶ್ವ ಪುಸ್ತಕ ದಿನಾಚರಣೆ’ ಸಮಾರಂಭದಲ್ಲಿಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು. ‘‘ಮೊಬೈಲ್ ನಿಂದ ಮಕ್ಕಳು ದೂರವಿದ್ದಷ್ಟು ಒಳ್ಳೆಯದು. ಇದರಿಂದ ಅಪಾರ ಸಮಯ ಉಳಿತಾಯವಾಗುತ್ತದೆ. ಹೀಗೆ ಉಳಿದ ಸಮಯವನ್ನು ಪುಸ್ತಕ ಓದಲು, ಆಟ ಆಡಲು, ಸ್ನೇಹಿತರ ಜತೆ ಬೆರೆಯಲು ಬಳಸಬಹುದು. ಆದ್ದರಿಂದ, ‘ಪುಸ್ತಕಂ ಹಸ್ತಂ ಭೂಷಣಂ’ ಎಂಬಂತೆ ಮಕ್ಕಳು ಕೈಯಲ್ಲಿಪುಸ್ತಕ ಹಿಡಿಯಬೇಕು,’’ ಎಂದರು. ‘‘ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿವ್ಯಾಸಂಗ ಮಾಡುತ್ತಿದ್ದರೂ ಕನ್ನಡ ಭಾಷೆ ಮರೆಯಬಾರದು. ಮಮ್ಮಿ-ಡ್ಯಾಡಿ ಎನ್ನುವ ಬದಲು ಅಪ್ಪ-ಅಮ್ಮ ಎನ್ನಬೇಕು. ಗ್ರಾಮೀಣ ಕ್ರೀಡೆಗಳ ಸೊಗಡನ್ನು ಸವಿಯಬೇಕು. ವಿದ್ಯೆಯ ಮೂಲಕ ವಿನಯ ಮತ್ತು ವಿವೇಕ ಪಡೆದು ಸಮಾಜಕ್ಕೆ ಮಾದರಿಯಾಗುವ ಸಾಧಕ ವ್ಯಕ್ತಿಗಳಾಗಬೇಕು,’’ ಎಂದರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ‘‘ಕನ್ನಡದಲ್ಲಿಮಕ್ಕಳಿಗಾಗಿ ಕವಿಗಳು ಕತೆ, ಕಾವ್ಯ, ನಾಟಕ, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅಂತಹ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಅದರಲ್ಲಿನ ಜ್ಞಾನ, ಅನುಭವ, ರಂಜನೆ ಲಭಿಸುತ್ತದೆ,’’ ಎಂದರು. ತಿಂಡಿ ತಿನಿಸು, ಆಟಿಕೆಗಳು ಹಾಗೂ ಹೊಸ ಬಟ್ಟೆಗಳನ್ನು ಕೊಡಿಸುವಂತೆ ಮಕ್ಕಳು ತಮ್ಮ ಪೋಷಕರನ್ನು ಒತ್ತಾಯ ಮಾಡುವಂತೆ, ಸಾಹಿತ್ಯ ಪುಸ್ತಕಗಳನ್ನು ಕೊಡಿಸುವಂತೆ ಒತ್ತಾಯ ಮಾಡಬೇಕು. ಅಂತಹ ಪುಸ್ತಕಗಳನ್ನು ಬಿಡುವಿನ ಸಮಯದಲ್ಲಿಓದಬೇಕು. ತಮ್ಮ ಸ್ನೇಹಿತರಿಗೂ ಓದಲು ಕೊಡಬೇಕು ಎಂದು ಸಲಹೆ ನೀಡಿದರು. ವಿ.ಕೆ. ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮೆಹರಿನ್ ತಾಜ…, ನಿವೃತ್ತ ಎಂಜಿನಿ ಯರ್ ರಾಮಕೃಷ್ಣ, ಯುವ ಕವಿ ಜಿ. ರವೀಂದ್ರ ಕುಮಾರ್ , ರಂಗಕರ್ಮಿಗಳಾದ ವಿನೋದ್ ಮೈಸೂರು ಮತ್ತು ಲೋಕನಾಥ್ ಸೋಗುಂ ಇದ್ದರು.

