ವಿಕ ಸುದ್ದಿಲೋಕ ಬೆಂಗಳೂರು
ಎನ್ .ಆರ್ . ಕಾಲೊನಿಯ ಎಪಿಎಸ್ ಕಾಲೇಜಿನ ಮೈದಾನದ ಎದುರಿನ ಭ್ರಮರಾಂಬ ಸಹಿತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರತಿಷ್ಠಿತ ಶ್ರೀ ಶಂಕರಾಚಾರ್ಯರ ವಿಶೇಷ ದೇವಾಲಯದಲ್ಲಿಶಂಕರ ಜಯಂತಿಯ ಮಂಗಳಾಚರಣೆಯನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ವಿದ್ವಾಂಸರೊಡಗೂಡಿ ಪ್ರಾತಃ ಕಾಲದಲ್ಲಿಮಹಾಗಣಪತಿ ಪೂಜೆ, ಗುರು ವಂದನೆ ಹಾಗೂ ಶತರುದ್ರಾಭಿಷೇಕ, ಫಲ ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ನಡೆಸಲಾಯಿತು.
ಶಂಕರ ಜಯಂತಿಯು ವೈಶಾಖ ಶುದ್ಧ ಪಂಚಮಿಯಂದು ಆರಂಭವಾಗಿ ದ್ವಾದಶಿಯಂದು ಅದನ್ನು ಸಂಪನ್ನಗೊಳಿಸಲಾಗಿದೆ. ಪ್ರತಿ ದಿನವೂ ಪ್ರಾತಃ ಕಾಲದಲ್ಲಿವಿಶೇಷ ಪೂಜೆಗಳನ್ನು ಕೈಗೊಂಡು ಶಂಕರಾಚಾರ್ಯರ ಅಷ್ಟೋತ್ತರ ಹಾಗೂ ರುದ್ರ ತ್ರಿಶತಿ, ಶಿವ ಸಹಸ್ರನಾಮಗಳನ್ನು ನಡೆಸಲಾಯಿತು. ಕೊನೆಯ ದಿನ ಮಂಗಳಾಚರಣೆಯನ್ನು ಮಾಡಿ ದೇವಸ್ಥಾನದ ಆವರಣದಲ್ಲೇ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ವಸ್ತ್ರ ದಾನಾದಿಗಳನ್ನು ಮಾಡಲಾಯಿತು.
ಶಂಕರ ಜಯಂತಿ ಯ ಸಂಪನ್ನ ಕಾರ್ಯಕ್ರಮದಲ್ಲಿಖ್ಯಾತ ಜ್ಯೋತಿಷಿ ಬಿ.ಎಸ್ . ದ್ವಾರಕಾನಾಥ್ ಗುರೂಜಿ ಅವರು ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡುತ್ತಾ, ‘‘ಶಂಕರಾಚಾರ್ಯರು ಸನಾತನ ಧರ್ಮಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ. ಭಗವದ್ಗೀತೆ, ಬ್ರಹ್ಮಸೂತ್ರಗಳು ಮತ್ತು ಉಪನಿಷತ್ ಭಾಷ್ಯವನ್ನು ಬರೆದು ಮನುಷ್ಯನ ಜೀವನಕ್ಕೆ ಮಹದುಪಕಾರ ಮಾಡಿದ್ದಾರೆ. ಶಾಶ್ವತವಾಗಿ ಕಾಶ್ಮೀರದಲ್ಲಿಶಾರದೆಯನ್ನು ಸ್ಥಾಪಿಸಿ ಸರ್ವಜ್ಞ ಪೀಠಾರೋಹಣವನ್ನು ದಕ್ಷಿಣ ದ್ವಾರದಿಂದ ಮಾಡಿರುವ ಏಕೈಕ ಮಹನೀಯರು ಶ್ರೀ ಶಂಕರರು. ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರು ಸಹ ಪ್ರಸ್ಥಾನ ತ್ರಯ ಭಾಷ್ಯವನ್ನು ಬರೆದರು. ಹಾಗಾಗಿ, ಆಚಾರ್ಯ/ಗುರು ಭೇದ ಭಾವವನ್ನು ನಾವು ಬೆಳೆಸಬಾರದು. ಶಂಕರ ಜಯಂತಿ ಆಚರಣೆಯಂತೆ ಮಧ್ವಾಚಾರ್ಯರ ಮತ್ತು ರಾಮಾನುಜಾಚಾರ್ಯರ ಜಯಂತಿಯನ್ನೂ ಆಚರಿಸಬೇಕು. ತ್ರಿಮತಸ್ಥರು ಎಲ್ಲರೂ ಸೇರಿ ದೇಶದ ಏಕತೆಗಾಗಿ ದುಡಿಯುವ ಸಮಯ ಬಂದಿದೆ,’ಧಿ’ ಎಂದರು.
ಇದೇ ವೇಳೆ ಕಮಲಾ ಮತ್ತು ಸಂಗಡಿಗರಿಂದ ಸೌಂದರ್ಯ ಲಹರಿ ದಕ್ಷಿಣ ಮೂರ್ತಿ ಅಷ್ಟಕ ಹಾಗೂ ಶಂಕರಾಚಾರ್ಯರು ರಚಿಸಿದ ಪದ್ಯ ರೂಪದ ಗೀತ ಗಾಯನ ನಡೆಸಿಕೊಟ್ಟರು.

