ವಿಕ ಸುದ್ದಿಲೋಕ ಚಿಕ್ಕಮಗಳೂರುವಿದ್ಯಾರ್ಥಿಗಳು ಕಲಿಕಾ ಸಮಯದಲ್ಲಿಮನಸ್ಸನ್ನು ಬೇರೆಡೆ ಹರಿಬಿಡದೆ ಶ್ರದ್ಧೆ ಮತ್ತು ಛಲದಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉನ್ನತ ಮಟ್ಟದ ವ್ಯಾಸಂಗಕ್ಕೆ ಅನುಕೂಲವಾಗಲಿದೆ ಎಂದು ತಾಲೂಕು ಕುರುಬರ ಸಂಘ ಅಧ್ಯಕ್ಷ ರಾಜು ಮಣೇನಹಳ್ಳಿ ಹೇಳಿದರು.
ತಾಲೂಕಿನ ಅಂಬಳೆ ಹೋಬಳಿಯ ದೇಗುಲಾಪುರ, ಗಿಡ್ಡೇನಹಳ್ಳಿ, ಸಿರಗಾಪುರ ಗ್ರಾಮದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಕುರುಬರ ಸಂಘದಿಂದ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಿಸಿ ಮಾತನಾಡಿದರು.
ಗ್ರಾಮೀಣ ಶಾಲಾ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಸಂಘವು ತಾಲೂಕಿನಾದ್ಯಂತ ಅನೇಕ ಸರಕಾರಿ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಿಸುತ್ತಿದೆ. ಈ ಸೌಕರ್ಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶಾಲೆ ಮತ್ತು ಪಾಲಕರ ಹೆಸರು ಉಳಿಸುವ ಮಹತ್ತರ ಕೆಲಸ ಮಾಡಬೇಕಿದೆ ಎಂದರು.
ಸರಕಾರಿ ಶಾಲೆಗಳಲ್ಲಿಓದುತ್ತಿರುವ ವಿದ್ಯಾರ್ಥಿಗಳು ಯಾರಿಗೂ ಕಡಿಮೆ ಇಲ್ಲದಂತೆ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಪಾಲಕರು ಸರಕಾರಿ ಶಾಲೆಗಳಲ್ಲಿವಿದ್ಯಾಭ್ಯಾಸ ಮಾಡುವುದು ಒಳಿತು ಎಂದರು.
ಶಾಲಾ ಮಕ್ಕಳು ವಿದ್ಯಾರ್ಜನೆ ಜತೆಗೆ ನಾಡಿಗಾಗಿ ಶ್ರಮಿಸಿದ ಕನಕದಾಸ, ಬಸವಣ್ಣ, ಕೆಂಪೇಗೌಡ, ಕುವೆಂಪು ಸೇರಿದಂತೆ ಮಹನೀಯರ ಜೀವನ ಚರಿತ್ರೆ ಅಧ್ಯಯನ ನಡೆಸಿ ಬದುಕಿನಲ್ಲಿಅಳವಡಿಸಿಕೊಳ್ಳಬೇಕು. ದಾರ್ಶನಿಕರು, ಕವಿಗಳ ಸಂದೇಶಗಳು ಮಾನವನನ್ನು ಸನ್ನಡತೆಯತ್ತ ಕೊಂಡೊಯ್ಯುವ ಶಕ್ತಿಯಿದೆ ಎಂದರು.
ಸಂಘದ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಆಧುನಿಕ ಜಗತ್ತಿನಲ್ಲಿಮಕ್ಕಳನ್ನು ಮೊದಲು ವಿದ್ಯಾವಂತರನ್ನಾಗಿ ರೂಪಿಸಬೇಕು. ಕೇವಲ ಅಂಕಗಳಿಕೆಗಷ್ಟೇ ಸೀಮಿತಗೊಳಿಸದೆ ಭಾರತೀಯ ಸಂಸ್ಕೃತಿ, ಸಂಸ್ಕಾರಯುತ ಮೌಲ್ಯಗಳನ್ನು ಬಾಲ್ಯದಲ್ಲೇ ಪಾಲಕರು ಬಿತ್ತಿದಲ್ಲಿಭವಿಷ್ಯದಲ್ಲಿಉತ್ತಮ ನಾಗರಿಕರಾಗುತ್ತಾರೆ ಎಂದರು.
ಈ ಸಂದರ್ಭ ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಮೂರ್ತಿ, ಕಾರ್ಯದರ್ಶಿ ಚಂದ್ರಶೇಖರ್ , ಮುಖಂಡರುಗಳಾದ ಮಹೇಶ್ , ಕೃಷ್ಣ, ಮಂಜುನಾಥ್ , ಮಾಸ್ತೇಗೌಡ, ತಮ್ಮೇಗೌಡ, ರಾಜು, ನಾಗರಾಜ್ , ಸುರೇಶ್ , ಪದ್ಮೇಗೌಡ ಮುಂತಾದವರು ಇದ್ದರು.
ಫೋಟೊ: 13ಚೇತನ್ ಪಿ-3
ಚಿಕ್ಕಮಗಳೂರು ತಾಲೂಕಿನ ದೇಗುಲಾಪುರದಲ್ಲಿಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಕುರುಬರ ಸಂಘದಿಂದ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿ ವಿತರಿಸಲಾಯಿತು.