ಕಿಕ್ಕರ್ : ಚನ್ನಗಿರಿ ತಾಲೂಕಿನಲ್ಲಿ7100 ಹೆಕ್ಟೇರ್ ಬಿತ್ತನೆ | ರೋಗ ಹತೋಟಿಗೆ ಸಂತೆಬೆನ್ನೂರು ಕೃಷಿ ಅಧಿಕಾರಿ ಸಲಹೆ
----ರಾಗಿ ಬೆಳೆದವರಿಗೆ ಬೆಂಕಿ ರೋಗ ಆತಂಕ
ವಿಕ ವಿಶೇಷ ಹಿರೇಕೋಗಲೂರು
ಚನ್ನಗಿರಿ ತಾಲೂಕಿನಲ್ಲಿಬಿತ್ತನೆ ಮಾಡಿದ ರಾಗಿಗೆ ಬೆಂಕಿ ರೋಗ ಕಾಣಿಸಿಕೊಂಡು ರೈತರನ್ನು ಆತಂಕಕ್ಕೆ ದೂಡಿದೆ. ರಾಗಿ ಬಿತ್ತನೆ ಮಾಡಿ 45ರಿಂದ 55 ದಿನಗಳಾಗಿವೆ. ರಾಗಿ ಗರಿ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡಿದ್ದು, ಗರಿಗಳು ಒಣಗಿದಂತೆ ಕಾಣುತ್ತಿವೆ.ರಾಗಿ ಬೆಳೆಯ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ರೈತರು ಜೂನ್ , ಜುಲೈನಲ್ಲಿಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಸಮರ್ಪಕ ಮಳೆಯಿಲ್ಲದೆ ಬೆಳೆ ಒಣಗಿದಾಗ, ಬೆಳೆ ಅಳಿಸಿ ಮರು ಬಿತ್ತನೆ ಮಾಡಿ ನಷ್ಟ ಅನುಭವಿಸಿದ್ದಾರೆ. ಆಗಿರುವ ನಷ್ಟ ಸರಿದೂಗಿಸಲು ರೈತರು ಮೆಕ್ಕೆಜೋಳ ಬದಲು ರಾಗಿ ಬಿತ್ತಿದ್ದಾರೆ. ಆದರೆ, ವಾತಾವರಣ ಬದಲಾವಣೆಯಿಂದಾಗಿ ರಾಗಿಗೆ ಬೆಂಕಿ ರೋಗ ಕಾಡತೊಡಗಿದೆ, ಜತೆಗೆ ಮುಳ್ಳು ಸಜ್ಜೆ ಕಳೆಯೂ ಇದೆ. ಚನ್ನಗಿರಿ ತಾಲೂಕಿನಲ್ಲಿ7,100 ಹೆಕ್ಟೇರ್ ನಲ್ಲಿರಾಗಿ ಬಿತ್ತನೆ ಮಾಡಲಾಗಿದೆ. ಬಹುತೇಕ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ.
ಮೆಕ್ಕೆಜೋಳದಲ್ಲಿಆದಂತೆ ರಾಗಿ ಬೆಳೆಯಲ್ಲೂನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ಆತಂಕಗೊಂಡಿದ್ದಾರೆ. ಈ ನಿಟ್ಟಿನಲ್ಲಿಬೆಂಕಿರೋಗ ತಗುಲಿರುವ ರಾಗಿ ಬೆಳೆಯ ಜಮೀನಿಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ, ಸರಕಾರಕ್ಕೆ ವರದಿ ಸಲ್ಲಿಸಿ, ತಾಲೂಕಿನ ಬೆಳೆಗಾರರಿಗೆ ನಷ್ಟ ಸಂಬಂಧಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೋಗ ತಡೆಗೆ ಸಲಹೆ:
ಈ ಕುರಿತು ವಿಕ ಜತೆ ಮಾತನಾಡಿದ ಸಂತೆಬೆನ್ನೂರು ಹಾಗೂ ದೇವರಹಳ್ಳಿ ಕೃಷಿ ಅಧಿಕಾರಿ ಬಿ.ಬಿ. ಕುಮಾರ್ , ‘ಸಂತೇಬೆನ್ನೂರು 1, 2ನೇ ಹೊಬಳಿಗಳ ವ್ಯಾಪ್ತಿಯಲ್ಲಿ2,700 ಹೆಕ್ಟೇರ್ ಪ್ರದೇಶದಲ್ಲಿರಾಗಿ ಬಿತ್ತನೆಯಾಗಿದೆ. ವಾತವರಣದಲ್ಲಿನ ಬದಲಾವಣೆಯಿಂದಾಗಿ ಬೆಳೆಗೆ ಬೆಂಕಿರೋಗ ಕಾಣಿಸಿಕೊಂಡಿದೆ. ರಾಗಿ ಬಿತ್ತುವಾಗ ಸಾಲಿಂದ ಸಾಲಿಗೆ ನಿಗದಿತ ಅಂತರ ಕಾಪಾಡಿಕೊಳ್ಳಬೇಕು, ಬೆಳೆ ಹತ್ತಿರವಾದರೆ, ತೇವಾಂಶ ಹೆಚ್ಚಾದಾಗ ಬೆಂಕಿರೋಗ ಕಾಣಿಸಿಕೊಳ್ಳುತ್ತದೆ. ರೋಗ ನಿಯಂತ್ರಣಕ್ಕೆ ಒಂದು ಲೀಟರ್ ನೀರಿಗೆ 1 ಗ್ರಾಂ. ಕಾರ್ಬೆಂಡಾಜೀಮ್ ಶಿಲೀಂದ್ರನಾಶಕ ಸಿಂಪಡಿಸಬೇಕು, 15 ದಿನಗಳ ಅಂತರದಲ್ಲಿಎರಡನೇ ಬಾರಿ ಸಿಂಪಡಿಸಬೇಕು,’ ಎಂದು ಸಲಹೆ ನೀಡಿದರು.
--
ಕೋಟ್ ..
ಹಿಂದೆಲ್ಲಾರಾಗಿಗೆ ಯಾವ ರೋಗವೂ ಇರಲಿಲ್ಲ. ಮಳೆ ಹೆಚ್ಚಾದಾಗ ಕೊಳೆ ರೋಗ ಬರುತ್ತಿತ್ತು. ಈ ಬಾರಿ ಬೆಂಕಿ ರೋಗ ಕಾಣಿಸಿಕೊಂಡಿದೆ, ರೈತರಿಗೆ ಒಂದರ ಮೇಲೊಂದು ಸವಾಲಿನಂತೆ ಕಷ್ಟಗಳು ಬರುತ್ತಿವೆ. ಕೃಷಿ ಇಲಾಖೆ ರೈತರ ತಾಕುಗಳಿಗೆ ಭೇಟಿ ರೋಗ ಹತೋಟಿ ಕುರಿತು ಸಲಹೆ ನೀಡಬೇಕು, ಹಾನಿಯಾದ ಬೆಳೆಗೆ ಪರಿಹಾರ ಕಲ್ಪಿಸಬೇಕು.