ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 9000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಸ್ನಾನಘಟ್ಟ ಬಳಿ ಕಾವೇರಿ ನದಿ ದಂಡೆಯಲ್ಲಿಅರಬೆತ್ತಲೆಯಲ್ಲಿಮಲಗಿ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರಬಾಬು ಮಾತನಾಡಿ, ‘‘ರಾಜ್ಯದಲ್ಲಿಬರಗಾಲವಿದೆ. ಈ ವರ್ಷ ಮಳೆಯಾಗದ ಕಾರಣ ಈಗಾಗಲೇ ರೈತರು ತಾವು ಬೆಳೆದಿದ್ದ ಕಬ್ಬು ಇತರ ಬೆಳೆ ಕಳೆದುಕೊಂಡು ನಷ್ಟ ಅನುಭವಿಸಿದ್ದಾರೆ. ಜಲಾಶಯಗಳು ಭರ್ತಿಯಾಗದ ಕಾರಣ ರೈತರು ಮುಂಗಾರು ಹಂಗಾಮಿನ ಭತ್ತದ ಬೆಳೆ ಬೆಳೆಯಲು ನೀರು ಹರಿಸಿಲ್ಲ. ಮಳೆಯೂ ಇಲ್ಲದೆ ಜಲಾಶಯಗಳಲ್ಲಿನೀರಿನ ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು ಹರಿಸುವಂತೆ ಅವೈಜ್ಞಾನಿಕವಾಗಿ ಸಮಿತಿ ಆದೇಶ ನೀಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದೆ ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಸ್ಥಿತಿಗೆ ನೂಕಿದೆ,’’ ಎಂದು ದೂರಿದರು.
‘‘ಜಿಲ್ಲಾಉಸ್ತುವಾರಿ ಮಂತ್ರಿ ಕಟ್ಟು ನೀರು ಹರಿಸಲಾಗುವುದು ಎಂದು ತಿಳಿಸಿದ್ದಾರೆ. ಭತ್ತ ಬೆಳೆಯದಂತೆ ಸೂಚನೆ ನೀಡಿದ್ದಾರೆ. ಇದು ಸರಿಯಾದ ಕ್ರಮವಲ್ಲಮೊದಲು ಬರಗಾಲ ಘೋಷಣೆ ಮಾಡಬೇಕು. ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ರಾಜ್ಯ ಸರಕಾರ ಸಮಿತಿಯ ಆದೇಶವನ್ನು ಪಾಲನೆ ಮಾಡಬಾರದು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು,’’ಎಂದು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಅಂಕಶೆಟ್ಟಿ, ಮಹೇಂದ್ರ, ಗಿರೀಶ್ , ಛಾಯದೇವಿ, ವೀಣಾಬಾಯಿ, ಭಾಗ್ಯಭಾಯಿ, ಸುಮಿತ್ರ, ಸಾವಿತ್ರಮ್ಮ ಮತ್ತಿತರರು ಹಾಜರಿದ್ದರು.
ಚಿತ್ರಶೀರ್ಷಿಕೆ.
ಎಂಡಿವೈ25ಎಸ್ ಆರ್ ಪಿ1.
ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 9000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣ ಕಾವೇರಿ ನದಿ ದಡದಲ್ಲಿಮಲಗಿ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಮಂಗಳವಾರ ಪ್ರತಿಭಟನೆ ನಡೆಸಿದರು.