ದೇಶದ ಸಾಮಾಜಿಕ ಹಿರಿಮೆಗೆ ವಿದೇಶಿಯರ ಗೌರವ
ವಿಕ ಸುದ್ದಿಲೋಕ ರಿಪ್ಪನ್ ಪೇಟೆ
ದೇಶವನ್ನು ವಿದೇಶಿಯರು ಗೌರವಿಸುವುದು ಇಲ್ಲಿನ ಜನರ ಆರ್ಥಿಕ ಶ್ರೀಮಂತಿಕೆ, ಸಂಪತ್ತುಗಳಿಗಾಗಿ ಅಲ್ಲ. ನಮ್ಮದು ಬುದ್ಧ, ಬಸವ, ನಾರಾಯಣ ಗುರುಗಳಂತಹ ದಾರ್ಶನಿಕರ ಕರ್ಮಭೂಮಿಯಾಗಿರುವುದರಿಂದ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆದ್ದಾರಿಪುರ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಿಂದ ಇತ್ತೀಚೆಗೆ ಬೆಳ್ಳೂರಿನಲ್ಲಿಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜಾತಿಯತೆ , ಅಸ್ಪೃಶ್ಯತೆ, ಅಸಮಾನತೆಗಳಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆದು, ಮಹಿಳೆಯರಿಗೆ ಪ್ರಾತಿನಿಧ್ಯ ದೊರಕಿಸುವಲ್ಲಿಬಸವಾದಿ ಶರಣರು, ಗುರುಗಳು 12ರಿಂದ 19 ನೇ ಶತಮಾನದ ವರೆಗೆ ಅವಿರತ ಶ್ರಮ ವಹಿಸಿದ್ದರ ಪರಿಣಾಮ ಸಮಾಜದಲ್ಲಿಪರಿವರ್ತನೆ ಕಾಣಬಹುದಾಗಿದೆ. ಅವರ ಮುಂದುವರಿದ ಪರಂಪರೆಯಂತೆ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರು ಕಾರ್ಯೋನ್ಮುಖರಾಗಿದ್ದಾರೆ. ಮನೆಯೊಡತಿಯಾದ ಮಹಿಳೆಗೆ ಆರ್ಥಿಕ ಜ್ಞಾನ ನೀಡಿದರೆ ಕುಟುಂಬ ಸದೃಢವಾಗುತ್ತದೆ ಎಂಬ ಅರಿವಿನಿಂದ ಗ್ರಾಮೀಣ ಮಹಿಳೆಯರಲ್ಲಿವಹಿವಾಟು, ಧರ್ಮಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಸಂಸ್ಥೆ ಜಿಲ್ಲಾನಿರ್ದೇಶಕ ಮುರುಳಿಧರ ಶೆಟ್ಟಿ, ಜಿಲ್ಲಾಜನಜಾಗೃತಿ ವೇದಿಕೆ ಅಧ್ಯಕ್ಷ ಮೋಹನ್ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷ ಮಂಜುನಾಥ, ತಾಲೂಕು ಯೋಜನಾಧಿಕಾರಿ ಪ್ರದೀಪ ಮತ್ತಿತರರು ಹಾಜರಿದ್ದರು.
1 ಆರ್ ಪಿಟಿ 1
ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಮೂಲಗದ್ದೆ ಮಠದ ಸ್ವಾಮೀಜಿ ಉದ್ಘಾಟಿಸಿದರು.

