ಪುತ್ತೂರು ವಕೀಲರ ಸಂಘದ ಮುಂದಿನ 2 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಗುರುವಾರ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಗೊಂಡಿದೆ. ನೂತನ ಅಧ್ಯಕ್ಷರಾಗಿ ಯುವ ನ್ಯಾಯವಾದಿ ಸಂತೋಷ್ ಕುಮಾರ್ ಕೆ. ವಿಜಯಿಯಾಗಿದ್ದಾರೆ. ಇತರ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿದೆ.ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಕುಮಾರ್ ಕೆ. ಮತ್ತು ಗಿರೀಶ್ ಮಳಿ ಸ್ಪರ್ಧಿಸಿದ್ದರು. ಪುತ್ತೂರು ಆನೆಮಜಲು ನೂತನ ನ್ಯಾಯಾಲಯ ಸಂಕೀರ್ಣದ ನೂತನ ಬಾರ್ ಎಸೋಸಿಯೇಶನ್ ಕಟ್ಟಡದಲ್ಲಿಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆದು ಬಳಿಕ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಯಿತು.
ಅಧ್ಯಕ್ಷರಾಗಿ ಸಂತೋಷ್ ಕುಮಾರ್ ವಿಜಯಿಯಾಗಿದ್ದರೆ, ಉಪಾಧ್ಯಕ್ಷರಾಗಿ ಮಹಾಬಲ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿಯಾಗಿ ಸ್ವಾತಿ ಜಗನ್ನಾಥ ರೈ, ಜತೆ ಕಾರ್ಯದರ್ಶಿಯಾಗಿ ಉದಯಚಂದ್ರ, ಕೋಶಾಧಿಕಾರಿಯಾಗಿ ಭಾರತಿ ಎ. ಅವಿರೋಧ ಆಯ್ಕೆಯಾಗಿದ್ದಾರೆ. ಎಸ್ . ಪ್ರವೀಣ್ ಕುಮಾರ್ , ಜಯಾನಂದ ಕೆ. ಮತ್ತು ಮನೋಹರ್ ಎ. ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ಜಗನ್ನಾಥ ರೈ ಅಧ್ಯಕ್ಷತೆಯ ಆಡಳಿತ ಮಂಡಳಿ ಮುಗಿದ ಬಳಿಕ ಈಗ ಹೊಸ ಆಡಳಿತ ಮಂಡಳಿ ರಚನೆಗೆ ಚುನಾವಣೆ ಪ್ರಕ್ರಿಯೆ ನಡೆದಿತ್ತು.
ಆಡಳಿತ ಮಂಡಳಿಯ 5 ಸ್ಥಾನಗಳಿಗೆ ಒಟ್ಟು 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷತೆಯ ಅಭ್ಯರ್ಥಿ ನೂರುದ್ದೀನ್ ಸಾಲ್ಮರ, ಕೋಶಾಧಿಕಾರಿ ಸ್ಥಾನಾರ್ಥಿ ಮಮತಾ ಸುವರ್ಣ ನಾಮಪತ್ರ ಹಿಂದಕ್ಕೆ ಪಡೆದುಕೊಂಡರು. ಹೀಗಾಗಿ ಕೋಶಾಧಿಕಾರಿಯಾಗಿ ಭಾರತಿ ಎ. ಅವಿರೋಧ ಆಯ್ಕೆಯಾದರೆ, ಅಧ್ಯಕ್ಷತೆಯ ಕಣದಲ್ಲಿಸಂತೋಷ್ ಕುಮಾರ್ ಕೆ. ಮತ್ತು ಗಿರೀಶ್ ಮಳಿ ಉಳಿದುಕೊಂಡರು. ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಜತೆ ಕಾರ್ಯದರ್ಶಿ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರು.