ಕೋಲಾರ: ಸಾಲ ಬಾಧೆಯಿಂದ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿಯಲ್ಲಿನಡೆದಿದೆ. ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಸುರೇಶ್ ಎಂಬುವರ ಪತ್ನಿ ಪ್ರಮೀಳಾ (40), ಪುತ್ರಿ ಸ್ವಪ್ನ (22) ಹಾಗೂ ಪುತ್ರ ಚರಣ್ (19) ಆತ್ಮಹತ್ಯೆಗೆ ಶರಣಾದವರು. ವೃತ್ತಿಯಲ್ಲಿಆಟೊ ಚಾಲಕರಾಗಿರುವ ಸುರೇಶ್ ಮನೆ ಕಟ್ಟಲು ಈಚೆಗೆ 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಸಾಲ ವಾಪಸ್ ಮಾಡುವಂತೆ ಸಾಲಗಾರರು ದುಂಬಾಲು ಬಿದ್ದಿದ್ದರು. ಸಾಲದಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿತ್ತು. ಇದರಿಂದ ಕುಟುಂಬದಲ್ಲಿಮನಸ್ತಾಪವೂ ಉಂಟಾಗಿತ್ತು. ಶುಕ್ರವಾರ ಬೆಳಗ್ಗೆ ಸುರೇಶ್ ಕೆಲಸಕ್ಕೆ ತೆರಳಿದ ಬಳಿಕ ಪ್ರಮೀಳಾ ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಜಿಗಿದು ಜೀವ ತೊರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.