ವಿಕ ಸುದ್ದಿಲೋಕ ಹಾವೇರಿಪ್ರತಿ ವಿದ್ಯಾರ್ಥಿಯಲ್ಲಿಯೂ ವಿಶೇಷ ಪ್ರತಿಭೆ, ಸಾಮರ್ಥ್ಯಗಳಿರುತ್ತವೆ. ಅವುಗಳನ್ನು ಹೊರಗೆ ತರುವಲ್ಲಿಪಠ್ಯೇತರ ಚಟುವಟಿಕೆಗಳ ಪಾತ್ರ ಮಹತ್ವವಾದದ್ದಾಗಿದೆ ಎಂದು ಖ್ಯಾತ ಜಾನಪದ ವಿದ್ವಾಂಸ ಪ್ರೊ. ಶಂಭು ಬಳಿಗಾರ ಹೇಳಿದರು.
ಇಲ್ಲಿಯ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿಮಂಗಳವಾರ ನಡೆದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿಅವರು ಮಾತನಾಡಿದರು. ‘‘ಕಠಿಣ ಪರಿಶ್ರಮ, ನಿರಂತರ ಪ್ರಯತ್ನಗಳಿಂದ ವಿದ್ಯಾರ್ಥಿಗಳು ವೃತ್ತಿ ಜೀವನ ರೂಪಿಸಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು.
‘‘ಸರಕಾರಿ ಉದ್ಯೋಗಾವಕಾಶಗಳು ಪ್ರತಿಶತ ಕೇವಲ 5 ರಷ್ಟು ಇದ್ದು, ಕೃಷಿ ವಲಯದಲ್ಲಿಲಭ್ಯವಿರುವ ಉದ್ಯೋಗಾವಕಾಶಗಳು ಇಂದಿನ ನಿರುದ್ಯೋಗ ಸಮಸ್ಯೆ ನಿವಾರಿಸಬಲ್ಲವು. ಎಂಜಿನಿಯರಿಂಗ್ ವೃತ್ತಿಯಲ್ಲಿದ್ದವರೂ ಇಂದು ಆ ಕ್ಷೇತ್ರ ಬಿಟ್ಟು ಕೃಷಿಯಲ್ಲಿಸಾಧನೆ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ,’’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ‘‘ವಿದ್ಯಾರ್ಥಿಗಳಲ್ಲಿಶಿಸ್ತು ಅಗತ್ಯ. ಭಾವೀ ಜೀವನ ರೂಪಿಸಿಕೊಳ್ಳಲು ಲಭ್ಯ ಅವಕಾಶ ಬಳಸಿಕೊಂಡು ಸಾಧನೆ ಮಾಡಬೇಕು,’’ ಎಂದರು.
‘‘ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕಾರ್ಯಪ್ರವೃತ್ತವಾಗಿದೆ. ಮುಂದಿನ ದಿನಗಳಲ್ಲಿಕ್ರೀಡಾಂಗಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು,’’ ಎಂದು ಭರವಸೆ ನೀಡಿದರು.
ಕುಲಸಚಿವ ಪ್ರೊ. ಎಸ್ .ಟಿ. ಬಾಗಲಕೋಟಿ ಮಾತನಾಡಿ, ‘‘ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಪಠ್ಯೇತರ ಚಟುವಟಿಕೆಗಳಲ್ಲಿಪಾಲ್ಗೊಳ್ಳಬೇಕು,’’ ಎಂದು ಸಲಹೆ ನೀಡಿದರು.
ಜಿಮಖಾನಾ ಅಧ್ಯಕ್ಷ ಡಾ.ವೈ.ಟಿ.ಭಜಂತ್ರಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಉಪಾಧ್ಯಕ್ಷೆ ಡಾ. ರೇಖಾ ಬಾಳೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಲತಾ ಪಾಟೀಲ, ವಿನಾಯಕ ಕೆ. ಉಪಸ್ಥಿತರಿದ್ದರು. ವಾಣಿ ನಿರೂಪಿಸಿದರು.
ಪೋಟೋ 23 ಮಂಜು 6
ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿಸ್ನಾತಕೋತ್ತರ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.