ವಿಕ ಸುದ್ದಿಲೋಕ ಬೆಂಗಳೂರು
ಗಂಡನ ಮೇಲಿನ ಸಿಟ್ಟಿನಿಂದ ಎರಡು ದಿನಗಳ ಹಿಂದೆ ಮನೆ ತೊರೆದಿದ್ದ ಗೃಹಿಣಿಯೊಬ್ಬರ ಮೃತದೇಹ ಕೊಮ್ಮಘಟ್ಟ ಕೆರೆಯಲ್ಲಿಪತ್ತೆಯಾಗಿದೆ.
ಜ್ಯೋತಿ (29) ಮೃತರು. ‘ಮಗಳ ಸಾವಿಗೆ ಅಳಿಯನ ವರದಕ್ಷಿಣೆ ಕಿರುಕುಳ ಕಾರಣ’ ಎಂದು ಆರೋಪಿಸಿ ಮೃತ ಜ್ಯೋತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿವರದಕ್ಷಿಣೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಜ್ಯೋತಿಯ ಪತಿ ಶರತ್ ಕುಮಾರ್ ನನ್ನು ಬಂಧಿಸಲಾಗಿದೆ. ಆರೋಪಿಯ ವಿಚಾರಣೆ ನಡೆಸಿ ಜೈಲಿಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಎಚ್ .ಡಿ.ಕೋಟೆ ಮೂಲದ ಶರತ್ ಕುಮಾರ್ ಹಾಗೂ ಜ್ಯೋತಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗುವಿದೆ. ಶರತ್ ಕ್ಯಾಬ್ ಚಾಲಕ ವೃತ್ತಿ ನಿರ್ವಹಿಸುತ್ತಿದ್ದರೆ, ಪತ್ನಿ ಮನೆಯಲ್ಲಿಇರುತ್ತಿದ್ದರು. ದಂಪತಿ ನಡುವೆ ಕೌಟುಂಬಿಕ ಕಲಹಗಳಿಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಜೂ.2ರಂದು ಸಾಯಂಕಾಲ ಜ್ಯೋತಿ ಮನೆಯಿಂದ ಹೊರಗೆ ಹೋದವರು ವಾಪಸ್ ಹೋಗಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಶರತ್ , ಪತ್ನಿಯ ಪೋಷಕರಿಗೆ ಮಾಹಿತಿ ನೀಡಿದ್ದರು. ಆನಂತರ ಎಲ್ಲರೂ ಹುಡುಕಾಟ ನಡೆಸತೊಡಗ್ದಿರು.
ಈ ನಡುವೆ, ಗುರುವಾರ ಕೊಮ್ಮಘಟ್ಟ ಕೆರೆಯಲ್ಲಿತೇಲುತ್ತಿದ್ದ ಮಹಿಳೆಯ ಮೃತದೇಹ ಗಮನಿಸಿದ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಪೊಲೀಸರು ಮೃತದೇಹ ಪರಿಶೀಲಿಸಿದಾಗ ಜ್ಯೋತಿ ಎಂಬುದು ಗೊತ್ತಾಗಿತ್ತು.
ಸ್ಥಳಕ್ಕೆ ಆಗಮಿಸಿದ್ದ ಜ್ಯೋತಿ ಪೋಷಕರು ಅಳಿಯನ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ‘‘ಅಳಿಯ ಶರತ್ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಲ್ಲದೆ, ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಎಸಗುತ್ತಿದ್ದ ಎಂದು ದೂರಿನಲ್ಲಿಆರೋಪಿಸಿದ್ದಾರೆ’’ ಎಂದು ಪೊಲೀಸರು ಹೇಳಿದ್ದಾರೆ.

