ವಿಕ ಸುದ್ಧಿಲೋಕ ಮೂಡುಬಿದಿರೆ
ತೆಂಕಮಿಜಾರು ಗ್ರಾಮದ ಪಡೀಲು ಕೊನ್ನೆರಬೆಟ್ಟು ಪ್ರದೇಶದಲ್ಲಿಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡದೇ ಸ್ಟೇರ್ ಲೈಟ್ ಕಂಪನಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಕಾಮಗಾರಿಯನ್ನು ಆರಂಭಿಸಲು ಮುಂದಾದ ಹಿನ್ನೆಲೆ ಸೋಮವಾರ ರೈತರು, ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿಪ್ರತಿಭಟನೆ ನಡೆಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಬೂಬ ಗೌಡ, ಅಪ್ಪಯ್ಯ ಗೌಡ, ಮೋನಪ್ಪ ಹಾಗೂ ಸುಂದರ ಶೆಟ್ಟಿ ಅವರ ಜಾಗದಲ್ಲಿಟವರ್ ನಿರ್ಮಾಣಕ್ಕೆ ಪೂರಕವಾದ ಕಾಮಗಾರಿಯನ್ನು ಕೈಗೊಳ್ಳಲು ಕಂಪೆನಿ ಮೊದಲು ಮರಗಳ ಸಮೀಕ್ಷೆ ನಡೆಸಿತ್ತು. ಇದೇ ಪ್ರದೇಶದಲ್ಲಿಈಗಾಗಲೇ ಟವರ್ ನಿರ್ಮಾಣಗೊಂಡಿದ್ದು, ಅದಕ್ಕೆ ಸಂಪರ್ಕವಾಗಿ ವಿದ್ಯುತ್ ತಂತಿ ಎಳೆಯುವ ಉದ್ದೇಶದಿಂದ ಈ ನಾಲ್ವರು ಸಂತ್ರಸ್ತರ ಜಾಗದಲ್ಲಿಕೆಲವು ಮರಗಳನ್ನು ಕಡಿಸಲು ಕಂಪನಿ ಮುಂದಾಗಿದೆ.
ಕಂಪನಿ ಅಧಿಕಾರಿಗಳಿಗೆ ಮರಗಳ ಮೌಲ್ಯ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸೂಕ್ತ ಪರಿಹಾರಧನವನ್ನು ಒದಗಿಸಿದ ಬಳಿಕವೇ ಕಾಮಗಾರಿ ನಡೆಸಲು ಅವಕಾಶ ನೀಡುವುದಾಗಿ ಸಂತ್ರಸ್ತರು ತಿಳಿಸಿದ್ದರು. ಆದರೆ ಕಂಪನಿ ಯಾವುದೇ ದಾಖಲೆ ಅಥವಾ ಪರಿಹಾರ ನೀಡದೇ ಪೊಲೀಸ್ ಪಡೆಯೊಂದಿಗೆ ಸೋಮವಾರ ಕಾಮಗಾರಿ ಆರಂಭಿಸಲು ಮುಂದಾದ ಹಿನ್ನೆಲೆಯಲ್ಲಿರೈತರು ಹಾಗೂ ಸಂತ್ರಸ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಜಿಲ್ಲಾಅಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಪ್ರವೀಣ್ ಭಂಡಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ನೇಮಿರಾಜ್ ಶೆಟ್ಟಿ, ಗ್ರಾಮದ ಕಿಸಾನ್ ಅಧ್ಯಕ್ಷ ಹೊನ್ನಪ್ಪ ಗೌಡ, ಸಂಜೀವ ಗೌಡ, ಕಿಸಾನ್ ಪ್ರಮುಖರಾದ ಶಿವಕುಮಾರ್ , ಪಡೀಲು ಕಿಸಾನ್ ಕಾರ್ಮಿಕ ಪ್ರಮುಖ ನೀತ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ: 10 ಎಂಡಿಬಿ ಪ್ರತಿಭಟನೆ

