ಅಖಂಡ ಕರ್ನಾಟಕ ರೈತ ಸಂಘ ಒತ್ತಾಯ
ಕಾನೂನು ತಿದ್ದುಪಡಿ ತನ್ನಿ
ವಿಕ ಸುದ್ದಿಲೋಕ ಬಸವನಬಾಗೇವಾಡಿ
‘‘ಜಮೀನುಗಳ ದಾರಿ ಸಮಸ್ಯೆ ಇತ್ಯರ್ಥಕ್ಕೆ ಸರಕಾರ ಕಾನೂನು ತಿದ್ದುಪಡಿಯೊಂದಿಗೆ ತಹಸೀಲ್ದಾರ್ ಗಳಿಗೆ ಅದರ ಅಧಿಕಾರವಹಿಸಬೇಕು,’’ ಎಂದು ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ ವಾಲಿಕಾರ, ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.
ಪಟ್ಟಣದಲ್ಲಿಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ‘‘ಸಾವಿರಾರು ಜಮೀನುಗಳ ದಾಖಲೆಯಲ್ಲಿದಾರಿ ಇಲ್ಲ. ಹಿಂದಿನಿಂದಲೂ ಆಯಾ ಜಮೀನುಗಳ ಒಂದು ಕಡೆ ಹಾಯುತ್ತಾ ಸಾಗುವಳಿ ಮಾಡಿಕೊಂಡು ರೈತರು ಹೋಗುತ್ತಿದ್ದಾರೆ. ಇಂತಹ ದಾರಿಗಳನ್ನೇ ಸರಕಾರ ಅಧಿಕೃತ ದಾರಿಗಳೆಂದು ಪರಿಗಣಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಈ ಕ್ರಮವಾಗದೇ ಇರುವುದರಿಂದ ಸಾಕಷ್ಟು ರೈತರು ಉಳುಮೆ ಮಾಡದೇ ಜಮೀನು ಹಾಳುಗೆಡವಿದ್ದಾರೆ,’’ ಎಂದರು.
‘‘ಜಮೀನು ಎಂದ ಮೇಲೆ ಅದಕ್ಕೆ ದಾರಿ ಬೇಕೇಬೇಕು. ಇದಕ್ಕಾಗಿ ತಕರಾರು ಮಾಡುವ ರೈತರ ಮೇಲೆ ದಿಟ್ಟ ಕ್ರಮ ಜರುಗಿಸಬೇಕು. ಅದೆಷ್ಟೋ ರೈತರ ಮೇಲೆ ದಾರಿ ಸಲುವಾಗಿಯೇ ಹಲ್ಲೆಗಳಾಗಿವೆ. ಪೊಲೀಸ್ ಠಾಣೆ, ನ್ಯಾಯಾಲಯ ಮೆಟ್ಟಿಲೇರಿವೆ. ಬ್ರಿಟಿಷರ ಕಾಲದ ನಕ್ಷೆಯನ್ನೇ ಮುಂದಿಟ್ಟುಕೊಂಡು ದಾಖಲೆಯಲ್ಲಿದಾರಿ ಇದ್ದರೆ ಮಾತ್ರ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದೇ ಅಧಿಕಾರಿಗಳು ಹೇಳುತ್ತಾರೆ. ಈಗ ಪ್ರತಿ ಜಮೀನಿಗೆ ತನ್ನದೇ ದಾರಿ ಸಿಗಲು ಹೊಸ ನಕ್ಷೆ ತಯಾರಾಗಬೇಕು,’’ ಎಂದು ಒತ್ತಾಯಿಸಿದರು.
ಲಂಕೇಶ ತಳವಾರ, ವಿಠ್ಠಲ ಬಿರಾದಾರ, ಕಲ್ಲಪ್ಪ ಕಾಳಗಿ, ಹನುಮಂತ್ರಾಯ ಹಂದ್ರಾಳ ಸೇರಿ ಇತರರು ಇದ್ದರು.

