ವಿಕ ಸುದ್ದಿಲೋಕ ಪುತ್ತೂರು
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಗ್ರಾಹಕ ವೇದಿಕೆ ವತಿಯಿಂದ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಗ್ರಾಹಕ ಜಾಗೃತಿ ಕಾರ್ಯಾಗಾರಗಳನ್ನು ಸವಣೂರು ಮತ್ತು ಸಜಂಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿಆಯೋಜಿಸಲಾಗಿತ್ತು.
ಶಾಲಾ ಮಕ್ಕಳಿಗೆ ಗ್ರಾಹಕರ ಮೂಲಭೂತ ಹಕ್ಕುಗಳು, ಜವಾಬ್ದಾರಿಯುತ ಖರೀದಿ ಪದ್ಧತಿ ಹಾಗೂ ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿರಬೇಕಾದ ಅಗತ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಯಿತು.
ಗ್ರಾಹಕ ವೇದಿಕೆಯ ಸದಸ್ಯರಾದ ಕಾಲೇಜು ವಿದ್ಯಾರ್ಥಿಗಳು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ನಾನಾ ಜಾಗೃತಿ ಚಟುವಟಿಕೆಗಳನ್ನು ನಡೆಸಿ, ಗ್ರಾಹಕ ಜಾಗೃತಿಗೆ ಸಂಬಂಧಿಸಿದ ಸರಳ ವಿಷಯಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿವಿವರಿಸಿದರು. ಜತೆಗೆ ಅನೇಕ ಉತ್ಪನ್ನಗಳನ್ನು ಪ್ರದರ್ಶಿಸಿ, ವಸ್ತುಗಳನ್ನು ಖರೀದಿಸುವಾಗ ಅದರ ಬೆಲೆ, ಉತ್ಪಾದನಾ ದಿನಾಂಕ, ಅವಧಿ ಮುಗಿಯುವ ದಿನಾಂಕ, ಗುಣಮಟ್ಟದ ಗುರುತುಗಳು ಹಾಗೂ ಸರಿಯಾದ ಲೇಬಲ್ ಮಾಹಿತಿಗಳನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ತಿಳಿಸಿದರು.
ಕಾರ್ಯಕ್ರಮವನ್ನು ಹೆಚ್ಚು ಆಸಕ್ತಿದಾಯಕವಾಗಿಸಲು ವಿದ್ಯಾರ್ಥಿಗಳು ಪ್ರಹಸನ ನಡೆಸಿದರು. ಉತ್ಪನ್ನ ಪ್ರದರ್ಶನ ಹಾಗೂ ಸಂವಾದಾತ್ಮಕ ಚಟುವಟಿಕೆ ನಡೆಸಿದರು. ಸಂತ ಫಿಲೋಮಿನಾ ಕಾಲೇಜಿನ ಗ್ರಾಹಕ ವೇದಿಕೆ ಸಂಯೋಜಕರಾದ ಪ್ರವೀಣ್ ಡಿ. ಮತ್ತು ಸ್ವಾತಿ ಶೆಟ್ಟಿ ಕಾರ್ಯಕ್ರಮ ಸಂಯೋಜನೆ ಮಾಡಿದರು.

