ಹೊಸದಿಲ್ಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಚುನಾವಣೆ ನಡೆಸಲು ನೀಡಿರುವ ಜೂನ್ 30ರ ಗಡುವನ್ನು 3 ತಿಂಗಳು ವಿಸ್ತರಿಸುವಂತೆ ಕೋರಿ ಕರ್ನಾಟಕ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.
‘‘ರಾಜ್ಯ ಸರಕಾರ ಜಿಬಿಎ ಚುನಾವಣಾ ಪ್ರಕ್ರಿಯೆಗಾಗಿ ಸಾಕಷ್ಟು ಅನುದಾನವನ್ನು ಮೀಸಲಿರಿಸಿದೆ. ಆದರೆ, ರಾಜ್ಯದಲ್ಲಿ‘ಎಸ್ ಐಆರ್ ’, ಶೈಕ್ಷಣಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿಜಿಬಿಎ ಚುನಾವಣೆ ನಡೆಸಲು ಹೆಚ್ಚುವರಿ ಸಮಯ ನೀಡಬೇಕು ಅರ್ಜಿಯಲ್ಲಿಉಲ್ಲೇಖಿಸಲಾಗಿದೆ.
ಜತೆಗೆ, ಈ ಸಂಬಂಧ ಜ.12ರಂದು ನೀಡಲಾಗಿರುವ ಆದೇಶದ ಪರಿಷ್ಕರಣೆಗೂ ರಾಜ್ಯ ಸರಕಾರ ಮನವಿ ಮಾಡಿದೆ. ರಾಜ್ಯ ಸರಕಾರದ ನೆರವಿನಿಂದ ಮಾತ್ರವೇ ಜಿಬಿಎ ಚುನಾವಣೆ ಪೂರ್ಣಗೊಳಿಸಲು ಸಾಧ್ಯ ಎಂದಿರುವ ರಾಜ್ಯ ಚುನಾವಣಾ ಆಯೋಗವು, ‘‘ಪ್ರಸ್ತುತ ಸರಕಾರವು ಹೆಚ್ಚಿನ ಸಂಖ್ಯೆಯ ನೌಕರರನ್ನು ‘ಎಸ್ ಐಆರ್ ’ ಪ್ರಕ್ರಿಯೆಗೆ ನಿಯೋಜಿಸಿರುವುದರಿಂದ ಜೂ.30ರೊಳಗೆ ಚುನಾವಣೆ ನಡೆಸಲು ಅಗತ್ಯ ಮಾನವ ಸಂಪನ್ಮೂಲ ಕೊರತೆ ಉಂಟಾಗಲಿದೆ,’’ ಎಂದು ಅರ್ಜಿಯಲ್ಲಿತಿಳಿಸಿದೆ.
ಇದಕ್ಕೂ ಮುನ್ನ ಸಲ್ಲಿಸಿದ್ದ ಅರ್ಜಿಯಲ್ಲಿಆಯೋಗವು ಚುನಾವಣೆ ಪೂರ್ಣಗೊಳಿಸಲು ಅಗತ್ಯವಾದ ಅನುದಾನ ಮತ್ತು ಮಾನವ ಸಂಪನ್ಮೂಲದ ಕೊರತೆಯಿದೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.

