ಜೀವಜಲ ಉಣಿಸುತ್ತಿದ್ದ ನದಿಗಳೇ ಜೀವಬಲಿ ಕೇಳುತ್ತಿವೆಯಾ? | ಮಗ್ಗೂರು ಕಾಡಾನೆ ಸಾವಿನ ಬಳಿಕ ಮೂಡುತ್ತಿದೆ ಈ ಪ್ರಶ್ನೆ
ಹರಿಶ್ಚಂದ್ರ ನಾಯ್ಕ ರಾಮನಗರ
್ಚಧಿha್ಟಜಿs್ಚha್ಞd್ಟa.್ಞaಜಿkಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಜಿಲ್ಲೆಯ ಜನರ ಪಾಲಿಗೆ ಜೀವಜಲ ನೀಡಬೇಕಿದ್ದ ನದಿಗಳು ಇದೀಗ ಜೀವಬಲಿ ಪಡೆಯಲು ಸಿದ್ಧವಾದಂತೆ ಕಾಣಿಸುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಕಲುಷಿತ ಒಳಚರಂಡಿ ನೀರು ಹಾಗೂ ಫ್ಯಾಕ್ಟರಿಗಳ ರಾಸಾಯನಿಕವನ್ನು ಹೊತ್ತು ಹರಿಯುತ್ತಿರುವ ಅರ್ಕಾವತಿ ಹಾಗೂ ವೃಷಭಾವತಿ ನದಿಗಳು ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯ ಜೀವಜಂತುಗಳ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿರುವ ಅನುಮಾನ ಮೂಡುತ್ತಿದೆ.
ಇತ್ತೀಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಮಗ್ಗೂರು ಅರಣ್ಯ ವ್ಯಾಪ್ತಿಯಲ್ಲಿಸಂಭವಿಸಿದ ಹೆಣ್ಣು ಕಾಡಾನೆಯೊಂದರ ನಿಗೂಢ ಸಾವು ಈಗ ನಾಗರಿಕ ವಲಯ ಮತ್ತು ಪರಿಸರ ಪ್ರೇಮಿಗಳಲ್ಲಿಇಂತಹುದೊಂದು ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕಾಡಾನೆಗಳ ಸಾವಿಗೆ ನದಿಯ ಕಲುಷಿತ ನೀರೇ ಕಾರಣ ಇರಬಹುದೇ ಎಂಬ ಸಂಶಯ ದಟ್ಟವಾಗಿದೆ.
ಮಗ್ಗೂರು ಅರಣ್ಯದಲ್ಲಿಕಾಡಾನೆ ಸಾವು-ಎಚ್ಚರಿಕೆಯ ಗಂಟೆ: ಕನಕಪುರ ತಾಲೂಕಿನ ಮಗ್ಗೂರು ಅರಣ್ಯ ಪ್ರದೇಶವು ವನ್ಯಜೀವಿಗಳ ಮುಕ್ತ ವಿಹಾರ ತಾಣ. ಆದರೆ, ಇತ್ತೀಚೆಗೆ ಇಲ್ಲಿಹೆಣ್ಣು ಕಾಡಾನೆಯೊಂದು ಅಕಾಲಿಕ ಮರಣಕ್ಕೀಡಾಗಿತ್ತು. ಮಗ್ಗೂರು ಅರಣ್ಯದಲ್ಲಿಸಾವಿಗೀಡಾಗಿದ್ದ ಈ ಹೆಣ್ಣಾನೆಯ ಮರಣೋತ್ತರ ಪರೀಕ್ಷೆಯಲ್ಲಿ35 ಲೀಟರ್ ನಷ್ಟು ನೀರು ಸಿಕ್ಕಿತ್ತು. ಈ ಆನೆ ಮಗ್ಗೂರು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಹಾಯ್ದು ಹೋಗುವ ಅರ್ಕಾವತಿ ನದಿಯಲ್ಲಿನೀರು ಕುಡಿದಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಅರ್ಕಾವತಿ ನದಿಯಲ್ಲಿನ ನೀರು ಸಂಪೂರ್ಣ ಕಲುಷಿತ ನೀರು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪದೇ ಪದೆ ಹೇಳುತ್ತಿದೆ. ಹೀಗಾಗಿ ಈ ಕಲುಷಿತ ನೀರು ಕುಡಿದಿರುವುದರಿಂದಲೇ ಆನೆ ಸಾವನ್ನಪ್ಪಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅರ್ಕಾವತಿ ಒಡಲು ವಿಷಯುಕ್ತ ಆಗುವುದು ಹೇಗೆ?: ಬೆಂಗಳೂರಿನ ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯದ ಮೂಲಕ ಹರಿದುಬರುವ ಅರ್ಕಾವತಿ ನದಿಯನ್ನು ಅತ್ಯಂತ ಮಲಿನಯುಕ್ತ ನದಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿಬಾರಿಯ ವರದಿಯಲ್ಲೂಹೇಳುತ್ತಿದೆ. ಬೆಂಗಳೂರು ನಗರದಿಂದಲೇ ಕಲುಷಿತಗೊಂಡು ಹರಿಯುವ ಅರ್ಕಾವತಿ ನದಿ, ರಾಮನಗರ ಪಟ್ಟಣದ ಮಧ್ಯಭಾಗದಲ್ಲಿಹರಿದು ಹೋಗುತ್ತದೆ. ರಾಮನಗರ ಪಟ್ಟಣದ ಎರಡೂ ಬದಿಯ ಶೌಚಾಲಯದ ತ್ಯಾಜ್ಯಗಳನ್ನು ನೇರವಾಗಿ ಈ ಅರ್ಕಾವತಿ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ರಾಮನಗರ ಬಿಟ್ಟು ಮುಂದಕ್ಕೆ ಹರಿಯುವ ವೇಳೆಗೆ ಅರ್ಕಾವತಿ ಮತ್ತಷ್ಟು ಮಲೀನಗೊಳ್ಳುತ್ತದೆ. ನಂತರ ಕನಕಪುರ ತಾಲೂಕಿನ ದೊಡ್ಡಮುದವಾಡಿ ಗ್ರಾಮದ ಬಳಿ ಬೆಂಗಳೂರಿನ ಸಮಗ್ರ ತ್ಯಾಜ್ಯವನ್ನು ಹೊತ್ತು ತರುವ ವೃಷಭಾವತಿ ನದಿ ಭೈರಮಂಗಲ ಕೆರೆಯ ಮೂಲಕ ಹಾದು ಬಂದು ಅರ್ಕಾವತಿಯನ್ನು ಸೇರುತ್ತದೆ. ಇಲ್ಲಿಗೆ ಅರ್ಕಾವತಿ ನದಿಯ ಮಾಲಿನ್ಯ ದುಪ್ಪಟ್ಟಾಗುತ್ತದೆ.
ಬೇಸಿಗೆಯ ಹಿನ್ನೆಲೆಯಲ್ಲಿಅರ್ಕಾವತಿ, ವೃಷಭಾವತಿ ನದಿಯಲ್ಲಿಶುದ್ಧ ನೀರು ಹರಿಯುತ್ತಿಲ್ಲ. ಬಹುತೇಕ ಚರಂಡಿ ನೀರೇ ತುಂಬಿದ್ದು, ಕಲುಷಿತ ನೀರಿನ ಆಗರವಾಗಿರುವ ಅರ್ಕಾವತಿ ನದಿ ಸಂಗಮದಲ್ಲಿಕಾವೇರಿ ನದಿಯನ್ನು ಸೇರುತ್ತದೆ. ಈ ಮೊದಲು ಕನಕಪುರ ತಾಲೂಕಿನ ಮಡಿವಾಳ ಗ್ರಾಮದ ಸಮೀಪ ಇರುವ ಅರಣ್ಯ ಪ್ರದೇಶವನ್ನು ಬಳಸಿಕೊಂಡು ಹೋಗಿ ಸಂಗಮದಲ್ಲಿಕಾವೇರಿಯೊಂದಿಗೆ ಲೀನವಾಗುತ್ತದೆ. ಮಗ್ಗೂರು ಅರಣ್ಯ ಪ್ರದೇಶ ಈ ಮಡಿವಾಳ ಗ್ರಾಮದ ಸಮೀಪವೇ ಇದ್ದು, ಅಲ್ಲಿಯೇ ಈ ಹೆಣ್ಣು ಕಾಡಾನೆ ಕಲುಷಿತ ನೀರನ್ನು ಸೇವಿಸಿದೆ ಎನ್ನಲಾಗುತ್ತಿದೆ.
ಬಾಕ್ಸ್ :
ಜೀವಜಲವಾಗಿದ್ದ ಅರ್ಕಾವತಿ ಈಗ ವಿಷದ ತೊರೆ
ಒಂದೊಮ್ಮೆ ಬಯಲು ಸೀಮೆಯ ಜೀವನಾಡಿಯಾಗಿದ್ದ ಅರ್ಕಾವತಿ ಇಂದು ಸಂಪೂರ್ಣ ರಾಸಾಯನಿಕ ತ್ಯಾಜ್ಯಗಳ ನದಿಯಾಗಿ ಮಾರ್ಪಟ್ಟಿದೆ. ಬೆಂಗಳೂರಿನ ಕೈಗಾರಿಕೆಗಳಿಂದ ಹೊರಬೀಳುವ ಸೀಸ, ಆರ್ಸೆನಿಕ್ ಮತ್ತು ಕ್ರೋಮಿಯಂನಂತಹ ಭಾರ ಲೋಹಗಳು ನೇರವಾಗಿ ಈ ನದಿಯನ್ನು ಸೇರುತ್ತಿವೆ. ಬೇಸಿಗೆ ಹಾಗೂ ಬಿಸಿಲಿನ ಬೇಗೆ ಹೆಚ್ಚಾದಾಗ ಅರಣ್ಯದೊಳಗಿನ ನೈಸರ್ಗಿಕ ನೀರಿನ ಮೂಲಗಳು ಬತ್ತಿಹೋಗುತ್ತವೆ. ಆಗ ಕಾಡಾನೆಗಳು, ಜಿಂಕೆಗಳು, ಚಿರತೆಗಳು ಸೇರಿದಂತೆ ನೂರಾರು ವನ್ಯಜೀವಿಗಳು ನೀರಡಿಕೆ ನೀಗಿಸಿಕೊಳ್ಳಲು ಈ ನದಿಯ ಆಶ್ರಯ ಪಡೆಯುವುದು ಅನಿವಾರ್ಯವಾಗುತ್ತದೆ. ಈ ಕಲುಷಿತ ನೀರನ್ನು ನಿರಂತರವಾಗಿ ಕುಡಿಯುವುದರಿಂದ ಪ್ರಾಣಿಗಳ ಯಕೃತ್ತು ಮತ್ತು ಮೂತ್ರಪಿಂಡಗಳು ಹಾನಿಗೊಳಗಾಗಿ, ಅವುಗಳು ಅಕಾಲಿಕವಾಗಿ ಸಾವನ್ನಪ್ಪುತ್ತಿವೆ.
ಬಾಕ್ಸ್ :
ಕೇವಲ ವನ್ಯಜೀವಿಗಳಲ್ಲ, ಮನುಷ್ಯರ ಆರೋಗ್ಯಕ್ಕೂ ಕಂಟಕ!
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿಹರಿಯುತ್ತಿರುವ ಈ ಅರ್ಕಾವತಿ ಮತ್ತು ವೃಷಭಾವತಿ ನದಿಗಳು ಕೇವಲ ವನ್ಯಜೀವಿಗಳಿಗೆ ಮಾತ್ರವಲ್ಲ. ಮಾನವನ ಆರೋಗ್ಯಕ್ಕೂ ಕಂಟಕ ತರುತ್ತವೆ. ಈ ನದಿಗಳು ಹರಿಯುವ ಹಳ್ಳಿಗಳ ಸುತ್ತಮುತ್ತಲಿನ ಅಂತರ್ಜಲವೂ ಈಗಾಗಲೇ ಕಲುಷಿತಗೊಂಡಿದೆ. ನದಿ ತೀರದ ಗ್ರಾಮೀಣ ಭಾಗದ ಜನರು ಇದೇ ನೀರನ್ನು ಕೃಷಿಗೆ ಬಳಸುತ್ತಿದ್ದು, ಆಹಾರ ಧಾನ್ಯಗಳ ಮೂಲಕ ರಾಸಾಯನಿಕಗಳು ಮನುಷ್ಯನ ದೇಹವನ್ನೂ ಸೇರುತ್ತಿವೆ. ಜಾನುವಾರುಗಳು ಈ ನೀರನ್ನು ಕುಡಿದು ನಿರಂತರವಾಗಿ ಕಾಯಿಲೆಗಳಿಗೆ ತುತ್ತಾಗುತ್ತಿವೆ.
ಬಾಕ್ಸ್ :
ಏನು ಕ್ರಮವಾಗಬೇಕು?
ಮಗ್ಗೂರು ಕಾಡಾನೆ ಸಾವು ಕೇವಲ ಒಂದು ಘಟನೆಯಲ್ಲ, ಇದು ಪ್ರಕೃತಿ ನೀಡುತ್ತಿರುವ ಮುನ್ಸೂಚನೆ ಎಂದು ಪರಿಸರವಾದಿಗಳು ಆತಂಕ ಹೊರಹಾಕಿದ್ದಾರೆ. ಮಗ್ಗೂರು ಅರಣ್ಯದಲ್ಲಿಸಾವನ್ನಪ್ಪಿದ ಆನೆಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಾರ್ವಜನಿಕಗೊಳಿಸಬೇಕು ಮತ್ತು ಅದರ ಒಳಾಂಗಗಳ ಮಾದರಿಯಲ್ಲಿರಾಸಾಯನಿಕ ಪತ್ತೆಯಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಬೆಂಗಳೂರಿನಿಂದ ಹರಿದುಬರುವ ನೀರನ್ನು ಸಂಪೂರ್ಣವಾಗಿ ಸಂಸ್ಕರಿಸಿದ ನಂತರವೇ ನದಿಗೆ ಬಿಡಲು ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವನ್ಯಜೀವಿಗಳು ವಿಷದ ನದಿ ನೀರನ್ನು ಕುಡಿಯುವುದನ್ನು ತಪ್ಪಿಸಲು ಅರಣ್ಯ ಇಲಾಖೆಯು ಕಾಡಿನ ಒಳಗಡೆಯೇ ಶುದ್ಧ ನೀರಿನ ಸೋಲಾರ್ ಪಂಪ್ ಹಾಗೂ ಕೃತಕ ಕೆರೆಗಳನ್ನು ನಿರ್ಮಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಫೋಟೋ:
25ಆರ್ ಎನ್ ಆರ್ ಎಚ್ ಎನ್ 02
ಕಲುಷಿತಗೊಂಡಿರುವ ಅರ್ಕಾವತಿ ನದಿಯ ನೋಟ
25ಆರ್ ಎನ್ ಆರ್ ಎಚ್ ಎನ್ 03
ಮಗ್ಗೂರು ಅರಣ್ಯ ಪ್ರದೇಶದಲ್ಲಿಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ಹೆಣ್ಣು ಕಾಡಾನೆ
25ಆರ್ ಎನ್ ಆರ್ ಎಚ್ ಎನ್ 04
ಎಐ ಚಿತ್ರ

