ವಿಕ ಸುದ್ದಿಲೋಕ ಉಡುಪಿ
ದ್ವೈತ ಮತ ಸ್ಥಾಪಕ ಶ್ರೀಮಧ್ವಾಚಾರ್ಯರ ಭಕ್ತಿಗೆ ಒಲಿದು ಕೈ ಸೇರಿದ, ಮಲ್ಪೆ ಕಡಲತೀರದಲ್ಲಿರುವ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ನೂತನ ನಿವೇಶನ ಶ್ರೀಆನಂದ ಶರಧಿಯಲ್ಲಿಮೇ 15ರಿಂದ 31ರ ತನಕ ಅಧಿಕ ಜ್ಯೇಷ್ಠ ಭಕ್ತಿ ಸುಧಾ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಪದಾಧಿಕಾರಿ ಗೋವಿಂದರಾಜ್ ತಿಳಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಪಂಚ ಮಠಾಧೀಶರ ಸಂಕಲ್ಪದಂತೆ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿಮೇ 15ರಂದು ಸಂಜೆ 4 ಗಂಟೆಗೆ ಹಲಸು, ಮಾವು, ಕೃಷಿ ಮೇಳದ ಉದ್ಘಾಟನೆ ನಡೆಯಲಿದೆ ಎಂದರು.
ಮೇ 18ರಂದು ಮಧ್ಯಾಹ್ನ 3.30ಕ್ಕೆ ವಡಭಾಂಡೇಶ್ವರದ ಬಲರಾಮ ದೇವಸ್ಥಾನದಿಂದ ಮಲ್ಪೆ ಕಡಲತೀರದಲ್ಲಿರುವ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ನೂತನ ನಿವೇಶನ ಶ್ರೀಆನಂದ ಶರಧಿ ತನಕ ಗಣ್ಯರೊಂದಿಗೆ ಭವ್ಯ ಶೋಭಾಯಾತ್ರೆ, ಭಜನಾ ಸ್ಪರ್ಧೆ ಉದ್ಘಾಟನೆ ಜರುಗಲಿದೆ. ಮೇ 24ರಂದು ಬೆಳಗ್ಗೆ 7ಗಂಟೆಗೆ ಗ್ರಾಮೀಣ ಕ್ರೀಡಾ ಸ್ಪರ್ಧೆ ಉದ್ಘಾಟನೆ, ಮೇ 31ರಂದು ಬೆಳಗ್ಗೆ 10ಗಂಟೆಗೆ ಮಾತೃ ವಂದನಾ, ಸಂಜೆ 4ರಿಂದ ಭಜನಾ ಸ್ಪರ್ಧೆ ಬಹುಮಾನ ವಿತರಣೆ, ಸಮಾರೋಪ ಸಮಾರಂಭ ನೆರವೇರಲಿದೆ. 15ದಿನಗಳ ಕಾಲ ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮೇಳವಿದೆ ಎಂದರು.
ಮಂಜು ಕೊಳ ಮಲ್ಪೆ, ಮಹಿಳಾ ಸಂಚಾಲಕಿ ತಾರಾ ಯು. ಆಚಾರ್ಯ, ಸುಮಿತ್ರಾ ಕೆರೆಮಠ, ವಿಜಯ ಕೊಡವೂರು, ರಾಧಾಕೃಷ್ಣ ಮೆಂಡನ್ , ಪ್ರೀತಂ ಭಟ್ , ಕಮಲಾವತಿ, ಚಂದ್ರಕಾಂತ್ ಕೆ. ಎನ್ ., ಸಂತೋಷ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
*ಮನೆ ಮನೆ ಭಜನೆ ಮೂಲಕ ಧರ್ಮ ರಕ್ಷಣೆ ಹಾಗೂ ಧರ್ಮ ಶಿಕ್ಷಣ ಕಾರ್ಯ, ಭಜನಾ ಮಂದಿರಗಳ ಬಲವರ್ಧನೆ ಗುರಿಯಾಗಿದೆ.
-ವಿಜಯ ಕೊಡವೂರು, ಮಾಜಿ ಸದಸ್ಯ, ಉಡುಪಿ ನಗರಸಭೆ
..............
ಮೇ 31: ಮಾತೃ ವಂದನಾ ಸಂಭ್ರಮ ಮುತ್ತೈದೆಯರಿಗೆ ಬಳೆ, ಅರಶಿನ, ಕುಂಕುಮ
ಮಾತೃ ವಂದನಾ ಕಾರ್ಯಕ್ರಮವು ಮೇ 31ರಂದು ನಡೆಯಲಿದ್ದು ಸೌಭಾಗ್ಯ ಶರಧಿಯಡಿ ಮುತ್ತೈದೆಯರಿಗೆ ಬಳೆ ತೊಡಿಸಿ, ಅರಶಿನ, ಕುಂಕುಮ ನೀಡಲಾಗುವುದು. ಭಕ್ತಿ ಶರಧಿಯಡಿ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ ಎಂದು ಮಹಿಳಾ ಸಂಚಾಲಕಿ ತಾರಾ ಯು. ಆಚಾರ್ಯ ತಿಳಿಸಿದರು.
ಸಮೃದ್ಧಿ ಶರಧಿಯಡಿ ಗೋ ಪೂಜೆ, ನವಧಾನ್ಯ ತಿನ್ನಿಸಿ ಗಣ್ಯರು ಆರತಿ ಮಾಡುವರು. ನಮೋ ಭಾರತಿಯಡಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಶುಭದೀಪ ಶರಧಿ(ಉದ್ಘಾಟನೆ), ಸಂದೇಶ ಶರಧಿ(ಅತಿಥಿ ಗಣ್ಯರಿಂದ ಸಂದೇಶ, ದಿಕ್ಸೂಚಿ ಭಾಷಣ) ನಡೆಯಲಿದೆ ಎಂದರು.

