ರಕ್ಕಸಪುರದೊಳ್ ರಕ್ಕಸಪುರ ಎಂಬ ಊರಲ್ಲಿವಿದ್ಯೆ ಎಂಬುದು ಮಾಟ, ಮೂಢನಂಬಿಕೆಗೆ ನೈವೇದ್ಯ. ಊರಿನ ದೇವ ಮಾನವ ಸಿದ್ದಯ್ಯನ್ನೇ ದ್ಯಾವ್ರು, ಆ ಊರಿಗೊಂದು ಪೊಲೀಸ್ ಸ್ಟೇಷನ್ನು, ಸಿದ್ದಯ್ಯನ ಪ್ರಭಾವ ಪೊಲೀಸರಿಗೆ ನೋ ಟೆನ್ಷನ್ . ಅಂಥದ್ದೊಂದು ಊರಿಗೆ ಬರುವ ಕುಡುಕ ಇನ್ಸ್ ಪೆಕ್ಟರ್ ಶಿವನಿಗೆ ಹೆಂಡತಿಯನ್ನು ಕಳೆದುಕೊಂಡ ಡಿಪ್ರೆಶನ್ನು. ಆರು ತಿಂಗಳ ಮಟ್ಟಿಗೆ ಊರಿಗೆ ಬಂದ ಪೊಲೀಸ್ ಶಿವನಿಗೆ ಹೆಂಡತಿ ಬದುಕಿದ್ದಾಳೆಂಬ ಭ್ರಮೆ, ಕ್ರೈಂ ರೇಟ್ ಇಲ್ಲದ ಊರಲ್ಲಿವಾರಕ್ಕೊಂದು ಮುಖ ಸುಟ್ಟ ಹೆಣ್ಣು ಮಕ್ಕಳ ಹೆಣ ಬೀಳಲು ಶುರುವಾಗುತ್ತದೆ. ಊರಿನವರ ಪ್ರಕಾರ ಅದು ಕೊಳ್ಳಿ ದೆವ್ವದ ಕಾಟ. ಅದರ ಜಾಡು ಹಿಡಿದು ಹೊರಟ ಇನ್ಸ್ ಪೆಕ್ಟರ್ ಶಿವನ ಮುಂದೆ ಒಂದೊಂದೇ ಭಯಾನಕತೆ ಅನಾವರಣಗೊಳ್ಳಲು ಶುರುವಾಗುತ್ತದೆ. ಅದು ದೆವ್ವದ ಕಾಟವಾ, ಶಿವನಿಗೆ ಕಾಡುವ ಭ್ರಮೆಯ ಕಾಟವಾ, ಯಾರದ್ದೋ ಸಂಚಿನ ಕೊಲೆಗಳಾ ಎಂಬುದು ಸಿನಿಮಾದ ಕಂಪ್ಲೀಟ್ ಸ್ಟೋರಿ. ಕೊಳ್ಳೇಗಾಲದ ದಟ್ಟಡವಿಯ ಊರಿನ ಹಿನ್ನೆಲೆಯಲ್ಲಿ, ಕಪ್ಪು ನಂಬರ್ ಪ್ಲೇಟ್ ಕಾಲದಲ್ಲಿನಡೆಯುವ ಕಥೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ರವಿ ಸಾರಂಗ ಸೀಟಿನ ತುದಿಗೆ ಕೂರಿಸುವ ಒಂದು ಅದ್ಭುತ ಟೈಟ್ ಸ್ಕ್ರೀನ್ ಪ್ಲೇಯೊಂದಿಗೆ ಸೈಕಲಾಜಿಕಲ… ಥ್ರಿಲ್ಲರ್ ಅನ್ನು ಹೆಣೆದಿದ್ದಾರೆ. ಬಹುತೇಕ ಕ್ಲೈಮ್ಯಾಕ್ಸ್ ವರೆಗೂ ಥ್ರಿಲ್ಲಿಂಗ್ ಎಲಿಮೆಂಟ್ ಕಾಯ್ದುಕೊಳ್ಳುವ ಸಿನಿಮಾಗೆ ಅರ್ಜುನ್ ಜನ್ಯಾ ಹಿನ್ನೆಲೆ ಸಂಗೀತ ಮೇಜರ್ ಪ್ಲಸ್ . ತಾವು ಇಂಥಾ ಥ್ರಿಲ್ಲರ್ ಸಿನಿಮಾವನ್ನು ರೋಮಾಂಚಕ ಬ್ಯಾಕ್ ಗ್ರೌಂಡ್ ಸ್ಕೋರ್ ಮೂಲಕ ಹಿಡಿದು ಕೂರಿಸಬಲ್ಲೇ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ ಜನ್ಯಾ. ಕ್ಯಾಮೆರಾಮನ್ ವಿಲಿಯಂ ಡೇವಿಡ್ ಗೆ ಹಸಿರು ಕಾನನ ಸೆರೆಹಿಡುವ ಕಾಯಕ ಹಸಿದ ಹೆಬ್ಬುಲಿಗೆ ಜಿಂಕೆ ಸಿಕ್ಕಂತ್ತಾಗಿದೆ. ಸಿನಿಮಾದಲ್ಲಿ ನಿರೀಕ್ಷಿತ ಟ್ವಿಸ್ವ್ ಗಳಿದ್ದರೂ ಅನಿರೀಕ್ಷಿತ ಪಾತ್ರಗಳು, ಅದನ್ನು ನಿಭಾ ಯಿ ಸುವ ಅನಿರೀಕ್ಷಿತ ತಾರಾಬಳಗ ಅದ್ಭುತ ಎನ್ನಿಸುತ್ತದೆ. ಎಲ್ಲಕ್ಕಿಂತ ಮುಖ್ಯ ಸಿನಿಮಾದ ವಿಲನ್ ಮತ್ತವರ ನಟನೆ. ಕನ್ನಡಕ್ಕೆ ಮತ್ತೊಬ್ಬ ಅದ್ಭುತ ಕಲಾವಿದನ ಕೊಡುಗೆ ಎನ್ನಬಹುದು. ರಾಜ್ ಬಿ. ಶೆಟ್ಟಿ ಅವರಷ್ಟೆ ತೆರೆಮೇಲೆ ಅಬ್ಬರಿಸಿದ್ದಾರೆ. ಸಿನಿಮಾದ ಥ್ರಿಲ್ಲಿಂಗ್ ಕಥೆಗೆ ರಾಜ್ ಬಿ. ಶೆಟ್ಟಿ ಮತ್ತವರ ಪೊಲೀಸ್ ಸೈನ್ಯದ ಟೈಮಿಂಗ್ ಕಾಮಿಡಿ ನೋಡುಗರನ್ನು ಸಖತ್ತಾಗಿ ಎಂಟರ್ ಟೈನ್ ಮಾಡುತ್ತದೆ. ಇಡೀ ಸಿನಿಮಾ ಸೀಟಿನ ತುದಿಗೆ ಕೂರಿಸಿ ಕ್ಲೈಮ್ಯಾಕ್ಸ್ ನಲ್ಲಿಎಲ್ಲಕ್ಕೂ ಉತ್ತರಿಸಲಾಗಿದ್ದರೂ, ಈಗ ಬರುತ್ತಿರುವ ವಾರಕ್ಕೊಂದು ಡಜನ್ ಸಿನಿಮಾಗಳ ಪೈಕಿ, ಮಿಸ್ ಮಾಡದೇ ಒಮ್ಮೆ ನೋಡಬಹುದಾದ ಚಿತ್ರ.

