ವಿಕ ಸುದ್ದಿಲೋಕ ಸಂತೇಮರಹಳ್ಳಿ
ಇಲ್ಲಿನ ಕರಡಿಮೋಳೆ ಹಾಗೂ ಯಲಕ್ಕೂರು ಗ್ರಾಮಗಳ ಮಾರ್ಗ ಮಧ್ಯೆ ಕಾರ್ಮಿಕ ಇಲಾಖೆ ಅನುದಾನದ 25 ಕೋಟಿ ರೂ.ವೆಚ್ಚದಲ್ಲಿಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿಅವರು ಮಾತನಾಡಿ, ‘‘ರಾಜ್ಯ ಸರಕಾರ ರಾಜ್ಯದ ಎಲ್ಲಜಿಲ್ಲೆಗಳು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿಯೇ ವಸತಿ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಕೊಡಿಸಲು ಕರಡಿಮೋಳೆ ಹಾಗೂ ಯಲಕ್ಕೂರು ಗ್ರಾಮಗಳ ಮಧ್ಯೆ 7 ಎಕರೆ ವಿಸ್ತೀರ್ಣದಲ್ಲಿ6ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ 300 ಮಕ್ಕಳು ವ್ಯಾಸಂಗ ಮಾಡುವ ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿಚಾಮರಾಜನಗರ ವಿವಿ ನಿಲಯ, ಕಾನೂನು ಕಾಲೇಜು, ಮೆಡಿಕಲ್ ಕಾಲೇಜು, ಕೇಂದ್ರಿಯ ವಿದ್ಯಾಲಯ, ಕೃಷಿ ವಿಜ್ಞಾನ ಕಾಲೇಜುಗಳಿದ್ದು, ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ಹಾಗಾಗಿ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು,’’ ಎಂದರು.
‘‘ಸಂಬಂಧಪಟ್ಟ ಗುತ್ತಿಗೆದಾರರು ಕಾಲಮಿತಿಯೊಳಗೆ ಗುಣಮಟ್ಟದ ಕಾರ್ಮಿಕರ ಮಕ್ಕಳ ವಸತಿ ಶಾಲೆ ನಿರ್ಮಿಸಿಕೊಡಬೇಕು,’’ಎಂದು ಸೂಚನೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಣ್ಣ, ಎಂ.ನಂಜುಂಡ, ಮರಿಸ್ವಾಮಿ, ಪ್ರಕಾಶ್ , ಯಲಕ್ಕೂರು ಮಧು, ಕೃಷ್ಣ, ಮಹದೇವಸ್ವಾಮಿ, ನವೀನ, ಜಿಲ್ಲಾಕಾರ್ಮಿಕಾಧಿಕಾರಿ ರಾಮಚಂದ್ರ, ಬಾಲಾಜಿ ಕೃಪಾ ಪ್ರಾಜೆಕ್ಟ್ ಕಂಪನಿ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಸಿಎಚ್ ಎನ್ 30ಎಸ್ ಎಂಆರ್ 3
ಕರಡಿಮೋಳೆ ಹಾಗೂ ಯಲಕ್ಕೂರು ಗ್ರಾಮಗಳಿಗೆ ಸಂಪರ್ಕಿಸುವ ಮಾರ್ಗ ಮಧ್ಯೆ ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೂಮಿಪೂಜೆ ನೆರವೇರಿಸಿದರು.

