(ಪೊಟೋ ಅಟ್ಯಾಚ್ ಇದೆ)
ವಿಕ ಸುದ್ದಿಲೋಕ ಬೆಂಗಳೂರು
ಜಮೀನು ಪೌತಿ ಖಾತೆ ಮಾಡಿಕೊಡಲು ಎರಡು ಲಕ್ಷ ರೂ. ಲಂಚ ಸ್ವೀಕರಿಸಿದ ಬೇಗೂರು ನಾಡಕಚೇರಿ ಗ್ರಾಮಲೆಕ್ಕಿಗ ಮಂಜುನಾಥ್ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವರ್ತೂರಿನ ನಿವಾಸಿ ದಿವಂಗತ ಅಹಮದ್ ಷರೀಫ್ ಹೆಸರಿನಲ್ಲಿದ್ದ 32 ಗುಂಟೆ ಜಮೀನು ಅವರ ಮಕ್ಕಳಿಗೆ ಪೌತಿ ಖಾತೆಯಾಗಬೇಕಿತ್ತು. ಆದರೆ, ಪೌತಿ ಖಾತೆ ಮಾಡಿಕೊಡಲು 10 ಲಕ್ಷ ರೂ. ಲಂಚ ನೀಡುವಂತೆ ಗ್ರಾಮ ಲೆಕ್ಕಿಗ ಮಂಜುನಾಥ್ ಬೇಡಿಕೆ ಇಟ್ಟಿದ್ದ. ಇದರಿಂದ ನೊಂದ ಸಂತ್ರಸ್ತರು ಲೋಕಾಯುಕ್ತ ಬೆಂಗಳೂರು ಪೊಲೀಸ್ ಘಟಕಕ್ಕೆ ದೂರು ನೀಡಿದ್ದಧಿರಿಂದ ಪ್ರಕರಣ ದಾಖಲಾಗಿತ್ತು.
ಗುರುವಾರ ಕಾರ್ಯಾಚರಣೆ ನಡೆಸಿದ್ದ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು, ಪೊಲೀಸ್ ಇನ್ಸ್ ಪೆಕ್ಟರ್ ವಿ.ಗಜೇಂದ್ರ ನೇತೃತ್ವದ ತಂಡವು ದೂರುದಾರರಿಂದ ಮುಂಗಡವಾಗಿ ಎರಡು ಲಕ್ಷ ರೂ. ಲಂಚ ಸ್ವೀಕರಿಸುವಾಗಲೇ ಮಂಜುನಾಥ್ ರನ್ನು ಬಂಧಿಸಿದೆ.
ಆರೋಪಿ ಗ್ರಾಮಲೆಕ್ಕಿಗ ಮಂಜುನಾಥ್ ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಆರೋಪಿ ಲಂಚ ಕೇಳಿರುವುದಕ್ಕೆ ಹಲವು ಸಾಕ್ಷ್ಯಾಧಾರಗಳು ಸಿಕ್ಕಿವೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

