ಇಂದು ಯುಪಿಎಸ್ ಸಿ ಪೂರ್ವಭಾವಿ ಪರೀಕ್ಷೆ
ಆಗಸ್ಟ್ 21ರಿಂದ ಮುಖ್ಯ ಪರೀಕ್ಷೆ | 933 ಹುದ್ದೆಗಳಿಗೆ ನೇಮಕ
ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ ಸಿ) ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ-2026 ಭಾನುವಾರ ದೇಶಾದ್ಯಂತ ಜರುಗಲಿದೆ. ಐಎಎಸ್ , ಐಪಿಎಸ್ , ಐಎಫ್ ಎಸ್ ಸೇರಿದಂತೆ ಒಟ್ಟು 933 ಹುದ್ದೆಗಳ ಭರ್ತಿಗಾಗಿ ಈ ಪರೀಕ್ಷೆ ನಡೆಯುತ್ತಿದ್ದು, ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷೆಗೆ ಸಂಬಂಧಿಸಿದಂತೆ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಕನಿಷ್ಠ 30 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು. ಗೇಟ್ ಮುಚ್ಚಿದ ನಂತರ ಯಾವುದೇ ಕಾರಣಕ್ಕೂ ತಡವಾಗಿ ಬರುವ ಅಭ್ಯರ್ಥಿಗಳಿಗೆ ಪ್ರವೇಶ ಇರುವುದಿಲ್ಲಎಂದು ಆಯೋಗ ಸ್ಪಷ್ಟಪಡಿಸಿದೆ.
ನಿಷೇಧಿತ ವಸ್ತುಗಳು: ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಗಳು, ಸ್ಮಾರ್ಟ್ ವಾಚ್ ಗಳು, ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು, ಬ್ಲೂಟೂತ್ ಸಾಧನಗಳು, ಕ್ಯಾಲ್ಕುಲೇಟರ್ ಹಾಗೂ ಪುಸ್ತಕ ಅಥವಾ ಬಿಳಿ ಕಾಗದಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಕೇವಲ ಸಾಮಾನ್ಯ ಕೈಗಡಿಯಾರ ಮತ್ತು ಪಾರದರ್ಶಕ ನೀರಿನ ಬಾಟಲಿಯನ್ನು ಮಾತ್ರ ಕೊಂಡೊಯ್ಯಲು ಅನುಮತಿ ನೀಡಲಾಗಿದೆ.
ಹೆಚ್ಚಿನ ಭದ್ರತೆ: ಪರೀಕ್ಷೆಯಲ್ಲಿಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ದೇಶಾದ್ಯಂತ ಇರುವ ಎಲ್ಲಾಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಕೇಂದ್ರಗಳ ಸುತ್ತ ಸಿಸಿಟಿವಿ ಕಣ್ಗಾವಲು ಇರಲಿದ್ದು, ಅಭ್ಯರ್ಥಿಗಳ ತಪಾಸಣೆಗೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದ ಬೆಂಗಳೂರು ಮತ್ತು ಧಾರವಾಡ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾರಿಗೆ ವ್ಯವಸ್ಥೆಯಲ್ಲೂಯಾವುದೇ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪೂರ್ವಭಾವಿ ಪರೀಕ್ಷೆಯಲ್ಲಿತೇರ್ಗಡೆಯಾಗುವ ಅಭ್ಯರ್ಥಿಗಳು ಆಗಸ್ಟ್ 21ರಿಂದ ಆರಂಭವಾಗಲಿರುವ ಮುಖ್ಯ ಪತ್ರಿಕೆ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ.
ಬಾಕ್ಸ್
ಮೂರು ಹೊಸ ಕೇಂದ್ರಗಳು
ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಾಗಿ ಭುವನೇಶ್ವರ, ಕಾನ್ಪುರ ಮತ್ತು ಮೀರತ್ ನಲ್ಲಿಮೂರು ಹೊಸ ಪರೀಕ್ಷಾ ಕೇಂದ್ರಗಳನ್ನು ಪರಿಚಯಿಸಿದೆ. ಅಭ್ಯರ್ಥಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪರೀಕ್ಷಾ ಕೇಂದ್ರಗಳು ಸುಲಭವಾಗಿ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿತ್ತು. ಈ ಕೇಂದ್ರಗಳ ಸೇರ್ಪಡೆಯೊಂದಿಗೆ, ಪೂರ್ವಭಾವಿ ಪರೀಕ್ಷೆಯ ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ 80 ರಿಂದ 83 ಕ್ಕೆ ಏರಿಕೆಯಾಗಿದೆ. ಆಯೋಗದ ಪ್ರಕಾರ, 23,400ಕ್ಕೂ ಹೆಚ್ಚು ಅಭ್ಯರ್ಥಿಗಳು ಹೊಸದಾಗಿ ಸೇರ್ಪಡೆಯಾದ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಈ ಹಿಂದೆ ಹೆಚ್ಚಿನ ಸಂಖ್ಯೆಯ ಅರ್ಜಿದಾರರನ್ನು ನಿಭಾಯಿಸುತ್ತಿದ್ದ ಹತ್ತಿರದ ನಗರಗಳ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
= = =

