ಕಥನ ಕುತೂಹಲ

Contributed byShridevi Ambekallu|Vijaya Karnataka
the beauty of ten thousand elephants the story of tataka
ಹತ್ತುಸಾವಿರ ಆನೆಗಳ ಬಲದ ಸುಂದರಿ

----
ಸ್ಲಗ್ : ಕಥನ ಕುತೂಹಲ

---

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

----

ಹತ್ತುಸಾವಿರ ಆನೆಗಳ ಬಲದ ಸುಂದರಿ ಯಾರು? ಅಷ್ಟು ಶಕ್ತಿಯನ್ನು ಪಡೆದ ಆಕೆಯ ಅವಸಾನ ಹೇಗಾಯಿತು?

----

ಆತನೊಬ್ಬ ಮಹಾಯಕ್ಷ. ಹೆಸರು ಸುಕೇತು. ದೇವವರ್ಗದವನಾದ್ದರಿಂದ ಸದ್ಗುಣವಂತನೂ ಸಚ್ಛೀಲವಂತನೂ ಆಗಿದ್ದನು. ಒಂದೇ ಕೊರತೆ ಎಂದರೆ ಅನಪತ್ಯತೆ. ಅಂದರೆ ಮಕ್ಕಳಿಲ್ಲದ ಕೊರಗು. ಸಂತಾನಪ್ರಾಪ್ತಿಗಾಗಿ ಬ್ರಹ್ಮನನ್ನು ಕುರಿತು ಕಠಿನವಾದ ತಪಸ್ಸನ್ನು ಆಚರಿಸಿದ. ಸುಕೇತುವಿನ ತಪಸ್ಸಿನಿಂದ ಸಂಪ್ರೀತನಾದ ವಿಧಾತ ಒಬ್ಬಳು ಕನ್ಯೆಯನ್ನು ಅನುಗ್ರಹಿಸಿದ. ಆಕೆ ಬ್ರಹ್ಮನ ಮನಃಸಂಜಾತೆ. ಅವಳ ಹೆಸರು ತಾಟಕೆ. ಬ್ರಹ್ಮನಿರ್ಮಾಣವೆಂದ ಮೇಲೆ ಆಕೆಯ ಸೌಂದರ್ಯಕ್ಕೆ ಸಾಟಿ ಇರಲು ಸಾಧ್ಯವಿಲ್ಲವಷ್ಟೆ ! ಸುಕೇತು ಅಪೇಕ್ಷಿಸಿದ್ದು ಪುತ್ರಸಂತಾನವನ್ನು. ಬ್ರಹ್ಮ ನೀಡಿದ್ದು ಪುತ್ರಿಯನ್ನು. ಯಾಕೋ ಏನೋ ಗಂಡುಮಗುವನ್ನು ದಯಪಾಲಿಸಲಿಲ್ಲ. ಆದರೆ, ಗಂಡುಮಗುವಿಗೆ ಪರ್ಯಾಯವಾಗಿ ತಾಟಕೆಗೆ ಹತ್ತುಸಾವಿರ ಆನೆಗಳ ಬಲವನ್ನು ಪ್ರಸಾದಿಸಿದ. ಅದುವರೆಗೂ ಪ್ರಪಂಚವು ಕಂಡರಿಯದ ಸ್ತ್ರೀವೀರತ್ವವು ತಾಟಕೆಯಲ್ಲಿನಿಕ್ಷಿಪ್ತವಾಯಿತು. ಲೋಕತ್ರಯವನ್ನು ಸಂಮೋಹಿಸುವ ರೂಪಾತಿಶಯದಿಂದ ತಾಟಕೆ ತಾರುಣ್ಯವನ್ನು ತಳೆಯುತ್ತಿರುವಾಗ ಸುಕೇತುವು ವರಾನ್ವೇಷಣವನ್ನು ಆರಂಭಿಸಿದ. ತೀವ್ರವಾದ ಹುಡುಕಾಟದ ಕೊನೆಗೆ ಒಬ್ಬ ವರನನ್ನು ಪತ್ತೆ ಹಚ್ಚಿದ. ಜಂಭ ಎಂಬವನ ಮಗನಾದ ಸುಂದನಿಗೆ ಮಗಳನ್ನು ಧಾರೆಯೆರೆದ. ತಾಟಕೆ-ಸುಂದರ ಜೋಡಿಯ ಸುಂದರತೆಯ ಪರಿಣಾಮಫಲವಾಗಿ ಹುಟ್ಟಿದವನೇ ಮಾರೀಚ. ತಾಯಿಯೇ ಹತ್ತುಸಾವಿರ ಆನೆಗಳ ಬಲವುಳ್ಳವಳಾದರೆ, ಮಗನ ಬಲವನ್ನು ಅಳೆಯಲಳವೇ! ಅವನೂ ಮಹಾಪರಾಕ್ರಮಿಯಾಗಿ ಬೆಳೆದ.

ಸುಂದನಲ್ಲಿಜನ್ಮತಃ ಆಸುರ್ಯವು ಮಡುಗಟ್ಟಿತ್ತು. ಬೂದಿ ಮುಸುಕಿದ ಕೆಂಡದಂತಿದ್ದ ರಕ್ಕಸತನ ಆಗಾಗ ಪುಟಿದೇಳುತ್ತಿತ್ತು. ಹೀಗೆ ಒಮ್ಮೆ ಸುಂದನು ಅಗಸ್ತ್ಯರ ಆಶ್ರಮವನ್ನು ಅಟಕಾಯಿಸಿದ. ಕುಬ್ಜಶರೀರಿಗಳಾದ ಕುಂಭಸಂಭವ ಅಗಸ್ತ್ಯರನ್ನು ಕಿಚಾಯಿಸಿದ. ಆಶ್ರಮವನ್ನು ಉಧ್ವಸ್ತಗೊಳಿಸಲು ಉಪಕ್ರಮಿಸಿದ. ಮಹರ್ಷಿಗಳ ದೇಹದ ಮೇಲೆ ಹಲ್ಲೆಮಾಡತೊಡಗಿದ. ಅಗಸ್ತ ್ಯರ ಕೋಪದ ಕಿಡಿ ಸಿಡಿಯಿತು. ಋುಷಿಗಳ ಕಣ್ಣಾಲಿಯ ಕೆಂಗಿಚ್ಚಿಗೆ ಸುಂದನು ಬೂದಿಯಾಗಿ ಹೋದ. ತನ್ನ ಗಂಡನು ಅಗಸ್ತ್ಯರ ಶಾಪಾಗ್ನಿಗೆ ಆಹುತಿಯಾದುದರಿಂದ ತಾಟಕೆ ಪ್ರತೀಕಾರಕ್ಕೆ ಸಜ್ಜಾದಳು. ಮಹಾಪರಾಕ್ರಮಿಯಾದ ಮಗ ಮಾರೀಚನನ್ನು ಒಡಗೂಡಿಕೊಂಡು ಅಗಸ್ತ ್ಯರ ಆಶ್ರಮಕ್ಕೆ ನುಗ್ಗಿದಳು. ಕೊಂದುಬಿಡುತ್ತೇನೆ, ತಿಂದುಬಿಡುತ್ತೇನೆಂದು ಆರ್ಭಟಿಸಿದಳು. ಹತ್ತುಸಾವಿರ ಆನೆಗಳ ದೋರ್ಬಲದ (ತೋಳಿನ ಕಸುವು ) ದುರ್ಮದದಿಂದ ಅಗಸ್ತ್ಯರ ಮೇಲೆ ಮುಗಿಬಿದ್ದಳು. ಮಾರೀಚನೂ ಅಬ್ಬೆಯ ಬೊಬ್ಬೆಯ ಜೊತೆಗೆ ಉಬ್ಬೆಗದಿಂದ ಗಬ್ಬರಿಸುತ್ತಿದ್ದ. ಭಗವಾನ್ ಅಗಸ್ತ ್ಯರು ವಡವಾನಲವಾದರು. ಕೊಲ್ಲಲೆಂದು ಕೈಯೆತ್ತಿ ಎರಗುತ್ತಿದ್ದ ಕುಮಾರ ಮಾರೀಚನಿಗೆ ‘ರಾಕ್ಷಸತ್ವಂ ಭಜಸ್ವ - ನೀನು ರಾಕ್ಷಸನಾಗು’ ಎಂದು ಶಪಿಸಿದರು. ಮಹರ್ಷಿಗಳ ಸುಡುಗಣ್ಣು, ಸುಂದರಿಯಾದ ತಾಟಕೆಯತ್ತ ಹೊರಳಿತು. ‘ರೇ ದುರ್ಮದೆ ! ಪುರುಷಾದೀ ಮಹಾಯಕ್ಷೀ ವಿರೂಪಾ ವಿಕೃತಾನನಾ, ದಾರುಣಂ ರೂಪಮಸ್ತು ತೇ - ನೀನು ನರಭಕ್ಷಕಳಾಗು. ನಿನಗೆ ಕರಾಳವಾದ ರೂಪ ಪ್ರಾಪ್ತವಾಗಲಿ. ಮುಖ ವಿಕಾರವಾಗಲಿ’ ಎಂದು ಶಪಿಸಿ ಅವರಿಬ್ಬರನ್ನೂ ಆಶ್ರಮದ ಪುಣ್ಯಸ್ಥಳದಿಂದ ಉಚ್ಚಾಟಿಸಿದರು.

ಗಂಡನು ಸತ್ತ. ಮಗನು ರಾಕ್ಷಸನಾದ. ತಾನು ವಿರೂಪಿಯಾದಳು. ಮಾಂಸಾಶಿನಿಯಾದಳು. ಯಕ್ಷಿಯಾಗಿದ್ದವಳು ನರಭಕ್ಷಿಣಿಯಾದಳು. ನೆಲೆದಪ್ಪಿದ ಪ್ರೇತದಂತೆ ತಾಯಿ ಮಗ ನಾಡು ಕಾಡೆನ್ನದೆ ಅಲೆದರು. ಹೀಗೆ ಅಲೆಯುತ್ತಿದ್ದವರಿಗೆ ತಂಗಲೊಂದು ತಾಣ ಸಿಕ್ಕಿತು. ಅದೇ ಮಲದ-ಕರೂಷ. ಈ ಪ್ರದೇಶಕ್ಕೂ ಒಂದು ಐತಿಹ್ಯವಿದೆ.

ದೇವೇಂದ್ರನು ವೃತ್ರನನ್ನು ಉಪಾಯಾಂತರದಿಂದ ವಧಿಸಿದ್ದನಲ್ಲ! ಆ ವೃತ್ರನು ತ್ವಷ್ಟ್ರ-ಬ್ರಹ್ಮನ ಮಗ. ಅಂದರೆ ಬ್ರಹ್ಮಸಂಜಾತ. ಅವನನ್ನು ಕೊಂದದ್ದರಿಂದ ಬ್ರಹ್ಮಹತ್ಯಾಪಾತಕವು ಇಂದ್ರನ ಬೆನ್ನು ಹತ್ತಿತು. ಪಾಪದ ಪರಿಮಾರ್ಜನೆಗಾಗಿ ಕಂಡಕಂಡಲ್ಲಿಸುತ್ತಿದ. ಸುಳಿದಾಡಿದ. ಅಡಗಿದ. ಓಡಿದ. ದಂಡಕಾಷ್ಠವಾಗಿ ಬೆಂಬತ್ತಿದ ಪಾಪವನ್ನು ಭೂವ್ಯೋಮಗಳಲ್ಲಿಹಂಚಿದ. ಪಾಪವೇನೂ ತೊಲಗಿತು. ಆದರೆ ಪಾಪದ ಅಂಟು ಕಳೆಯಲಿಲ್ಲ. ಹಸಿವು ನೀರಡಿಕೆ ಬಳಲಿಕೆ ಕಳಲಿಕೆಗಳಿಂದ ಜಂಭಾರಿ ಜರ್ಜರಿತನಾದ. ಆಗ ದೇವತೆಗಳು ಋುಷಿಗಳು ಸೇರಿ ದೀರ್ಘವಾಗಿ ಸಮಾಲೋಚಿಸಿ ಒಂದು ನಿರ್ಣಯಕ್ಕೆ ಬಂದರು. ಆ ಪ್ರಕಾರವಾಗಿ ಇಂದ್ರನನ್ನು ಒಂದು ಭೂಪ್ರದೇಶಕ್ಕೆ ಕರೆತಂದರು. ಅವನಿಗೆ ಮಂತ್ರೋದಕದಿಂದ ಅಭಿಷೇಚನವನ್ನು ಮಾಡಿದರು. ಅದರಿಂದ ಇಂದ್ರನ ಆಶುಚಿಯೂ (ಮಲವೂ ) ಹಸಿವೆಯೂ (ಕರೂಷವೂ) ಅವನಿಂದ ದೂರವಾಯಿತು. ‘ಯಾವ ಸ್ಥಳದಲ್ಲಿನನ್ನ ಮಲವೂ ಕರೂಷವೂ ಕಳೆಯಿತೋ, ಆ ಪ್ರದೇಶವು ಮುಂದೆ ಮಲದ ಕರೂಷ ಎನ್ನುವ ಹೆಸರಿನಿಂದ ಪ್ರಸಿದ್ಧವಾಗಲಿ’ ಎಂದು ಇಂದ್ರನು ವರವಿತ್ತ. ಮಹರ್ಷಿಗಳು ದೇವತೆಗಳು ಮಲದಕರೂಷದಲ್ಲಿಮಂತ್ರವಿಧಿಯನ್ನು ಸಮಾಚರಿಸಿದ ಸತ್ಪರಿಣಾಮದಿಂದ, ಆ ಪ್ರದೇಶವು ಸಕಲ ಸಂಪತ್ ಸಮೃದ್ಧವಾಗಿ ಬೆಳೆಯಿತು. ಧನಧಾನ್ಯಗಳಿಂದ ತುಂಬಿ ತುಳುಕಿತು. ಮಹರ್ಷಿ ಅಗಸ್ತ್ಯರೂ ಮಲದಕರೂಷದ ವಲಯಲ್ಲಿಕೊಂಚ ಕಾಲ ತಂಗಿದ್ದರು.

ಅಗಸ್ತ ್ಯ ವಿದ್ವೇಷದಿಂದ ಕೊತಕೊತ ಕುದಿಯುತ್ತಿದ್ದ ತಾಟಕೆ ಮಾರೀಚರು, ಅಗಸ್ತ ್ಯರು ಇಲ್ಲಿದ್ದರೆಂಬ ಒಂದೇ ಕಾರಣಕ್ಕೆ ಮಲದಕರೂಷಕ್ಕೆ ಲಗ್ಗೆ ಇಟ್ಟರು. ಪಚ್ಚೆ ಪೈರಿನಿಂದ ಮೈದುಂಬಿಕೊಂಡಿದ್ದ ಪ್ರಾಂತವನ್ನು ರುಬ್ಬಿ ರಾಡಿ ಎಬ್ಬಿಸಿದರು. ಇಂದ್ರನ ಹಸಿವೆಯನ್ನು ನೀಗಿದ ಜಾಗವು ತಾಟಕೆಯ ಹಸಿವನ್ನು ಇಮ್ಮಡಿ ಮುಮ್ಮಡಿಗೊಳಿಸಿತು. ಮದಮತ್ತನಾದ ಮಾರೀಚನ ಮಲಮತಿಯನ್ನು ಮೂಲೋನ್ಮೂಲನ ಮಾಡಿತು. ಪ್ರಜಾಸಂಮರ್ದದಿಂದ ಸಂಭ್ರಮಿಸುತ್ತಿದ್ದ ಮಲದಕರೂಷವು ಜೀರುಂಡೆಗಳ ಜೀರ್ದನಿಯ ಜೌಗು ಜಾಗವಾಯಿತು. ಹೊನ್ನಾಡು ಕಗ್ಗಾಡಾಯಿತು. ವನ್ಯಮೃಗಗಳ ನೆಲೆವೀಡಾಯಿತು. ಮಾಂಸಭಕ್ಷಿಣಿ ತಾಟಕೆಯ ಔದ್ಧತ್ಯದ ಮೃತ್ಯುಪದಾಘಾತದ ಮಾರಣರಂಗಸ್ಥಳವಾಯಿತು.

ತಾಟಕೆಯ ನಿಗ್ರಹಕ್ಕೆ ರಾಮ-ಲಕ್ಷ್ಮಣರು

ಘೋರಯಕ್ಷಿಯಾದ ತಾಟಕೆಯ ಪೂರ್ವೇತಿಹಾಸ ತಿಳಿದಿದ್ದವರು ಭಗವಾನ್ ವಿಶ್ವಾಮಿತ್ರರು. ಅವಳನ್ನು ತದುಕಲು ದೇವತೆಗಳೂ ಹಿಂಜರಿಯುತ್ತಾರೆ ಎಂಬುದು ಅವರಿಗೆ ಅವಗತವಾಗಿತ್ತು. ಲೋಕಕಂಟಕಳಾದ ಧರ್ಮಭ್ರಷ್ಟಳಾದ ತಾಟಕೆಯನ್ನು ನಿಗ್ರಹಿಸಲೆಂದೇ ಬಾಲಕರಾದ ರಾಮ ಹಾಗೂ ಲಕ್ಷ್ಮಣರೊಂದಿಗೆ ಅದೇ ಕೀಕಾರಣ್ಯದ ಹಾದಿಯಲ್ಲಿಬಂದರು ಕೌಶಿಕರು. ಗುರುಗಳ ಆದೇಶಾನುಸಾರವಾಗಿ ಬಾಲರಾಮನು ಜ್ಯಾಶಬ್ದಮಕರೋತ್ - ಕೋದಂಡದ ನಡುವನ್ನು ಮುಟಿಗೆಯಲ್ಲಿಹಿಡಿದು ಹೆದೆಯನ್ನು ಎಳೆದ. ಧನುವಿನ ಝಂಕಾರ ಕಾಡಿನ ಕತ್ತಲೆಯನ್ನು ಭೇದಿಸಿ ಮಾರ್ಮೊಳಗಿತು. ಅತಂತ್ರಪಿಶಾಚಿಯಾಗಿ ಎಲ್ಲೆಲ್ಲೋ ಸುತ್ತುತ್ತಿದ್ದ ತಾಟಕೆಯು ಕಾಡನ್ನು ನಡುಗಿಸುವ ಪೆರ್ದನಿಗೆ ಕನಲಿದಳು. ಚಂಡಮಾರುತವಾಗಿ ಆರ್ಭಟಿಸುತ್ತ ಆಕಾಶದಲ್ಲಿಕಿರುಚಾಡಿದಳು. ಈ ಸಂದರ್ಭವನ್ನು ಚಂಪೂರಾಮಾಯಣಕಾರನಾದ ಭೋಜರಾಜನು ಅತ್ಯಂತ ಸೊಗಸಾಗಿ ವರ್ಣಿಸಿದ್ದಾನೆ. ಅಥ ದಾಶರಥೇಃ ಕರ್ಣಂ ಅವಿಶತ್ ತಾಟಕಾಗುಣಃ, ತಥಾ ಧನುರ್ಗುಣಃ ತೂರ್ಣಂ ಪ್ರಾವಿಶತ್ ತಜ್ಜಿಘಾಂಸಯಾ - ತಾಟಕೆಯ ನೀಚಗುಣಗಳು ಬೊಬ್ಬೆಯಾಗಿ ರಾಮನ ಕಿವಿಯನ್ನು ಹೊಕ್ಕಿತು. ಹಾಗೆಯೇ ಅವಳನ್ನು ಕೊಲ್ಲುವ ಬಯಕೆಯಿಂದ ರಾಮನ ಬಿಲ್ಲಿನ ಗುಣವೂ (ಹೆದೆಯೂ) ರಾಮನ ಕಿವಿಯನ್ನು ಸಮೀಪಿಸಿತು. ಅಂದರೆ ಆಕರ್ಣಾಂತವಾಗಿ ಶಿಂಜಿನಿಯನ್ನು ರಾಮನು ಸೆಳೆದ. ಹತ್ತುಸಾವಿರ ಆನೆಯ ಬಲದ ಹೆಣ್ಣಿನ ಹೆಣ ಬಿತ್ತು.