ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆ

Contributed bypooja255647@gmail.com|Vijaya Karnataka
Vijay Karnataka
* ಪ್ರಜಾಸೇವೆ ಕಾರ್ಯಕ್ರಮದಲ್ಲಿತಹಸೀಲ್ದಾರ್ ಗೌಸಿಯಾಬೇಗಂ ಹೇಳಿಕೆ

ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆ
ವಿಕ ಸುದ್ದಿಲೋಕ ಸಿರುಗುಪ್ಪ

‘‘ಕಚೇರಿಗಳಿಗೆ ಬಡ ಜನರ ಅಲೆದಾಟ ತಪ್ಪಿಸಲು ತಾಲೂಕು ಆಡಳಿತದ ಎಲ್ಲಅಧಿಕಾರಿಗಳೇ ನೇರವಾಗಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವರು. ಸರಕಾರದ ಈ ಸೇವೆಯನ್ನು ಪ್ರತಿಯೊಬ್ಬ ನಾಗರಿಕರು ಸದುಪಯೋಗ ಮಾಡಿಕೊಳ್ಳಬೇಕು,’’ ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದರು.

ತಾಲೂಕಿನ ಹಾಗಲೂರು ಹೊಸಳ್ಳಿ ಗ್ರಾಮದ ಸರಕಾರಿ ಶಾಲಾ ಅವರಣದಲ್ಲಿಶನಿವಾರ ನಡೆದ ‘ಪ್ರಜಾಸೇವೆ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿ, ‘‘ಜನರು ನೀಡಿದ ದೂರುಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿ ಮನೆಬಾಗಿಲಿಗೆ ಸರಕಾರದ ಸೇವೆಗಳನ್ನು ತಲುಪಿಸಲಾಗುತ್ತಿದೆ,’’ ಎಂದರು.

ತಾಪಂ ಇಒ ಪವನ್ ಕುಮಾರ್ ಡಿ. ಮಾತನಾಡಿ, ‘‘ಸೆ.17ರಿಂದ ಆರಂಭವಾದ ‘ಸ್ವಚ್ಛವಾಹಿನಿ’ ಕಾರ್ಯಕ್ರಮ ಮೂಲಕ ಅ.2ರವರೆಗೆ ಪ್ರತಿಯೊಬ್ಬರಿಗೂ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಕುರಿತು ಪ್ರತಿಯೊಬ್ಬರು ಪ್ರತಿಜ್ಞಾವಿಧಿ ಅನುಸರಿಸಬೇಕು,’’ ಎಂದರು.

ಕೃಷಿ, ತೋಟಗಾರಿಕೆ, ಕಂದಾಯ, ಭೂಮಾಪನ, ಪೊಲೀಸ್ ಇಲಾಖೆ ಸೇರಿ ಇತರೆ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಮಾಹಿತಿ ನೀಡಿದರು.

ರೈತ ಸಂಘದ ಅಧ್ಯಕ್ಷ ಆರ್ .ಮಾಧವರೆಡ್ಡಿ ಮಾತನಾಡಿ, ‘‘ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶ ಎಂದು ಸರಕಾರ ಶೀಘ್ರವೇ ಘೋಷಣೆ ಮಾಡಬೇಕು. ಈ ಬಾರಿ ವಿಮೆ ಹಣ ಪಾವತಿಸಿದ ಪ್ರತಿಯೊಬ್ಬ ರೈತರಿಗೂ ಸಂಪೂರ್ಣ ಪರಿಹಾರದ ಮೊತ್ತ ಭರಿಸಬೇಕು, ಬಿತ್ತನೆ ಮಾಡಿದ್ದ ಬೆಳೆ ನಾಶಪಡಿಸಿದಾಗಲೂ ವಿಮೆ ನೋಂದಾಯಿಸಿದ ಬೆಳೆಗೆ ಪರಿಹಾರ ಪಾವತಿಸಬೇಕು,’’ ಎಂದು ಒತ್ತಾಯಿಸಿದರು.

‘ಪ್ರಜಾಸೇವೆ’ಯ ಒಟ್ಟು 3 ಕಾರ್ಯಕ್ರಮದಲ್ಲಿ2 ಕಾರ್ಯಕ್ರಮಗಳಿಗೆ ಶಾಸಕರು ಹಾಜರಾಗದ ಕಾರಣ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸ್ಥಳೀಯ ನಾನಾ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.

ಬಿಇಒ ಗುರಪ್ಪ, ಸಮಾಜ ಕಲ್ಯಾಣಾಧಿಕಾರಿ ಎಂ.ಸಿದ್ದಯ್ಯ, ಬಿಸಿಎಂ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ, ಕೃಷಿ ಇಲಾಖೆ ಉಪ ನಿರ್ದೇಶಕ ಎಂ.ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಹಿರೇಮಠ, ತೆಕ್ಕಲಕೋಟೆ ಪಪಂ ಮುಖ್ಯಾಧಿಕಾರಿ ದುರುಗಪ್ಪ, ಸಿರಿಗೇರಿ ಠಾಣೆ ಪಿಎಸ್ ಐ ಶಶಿಧರ್ , ಟಿಎಚ್ ಒ ಡಿ.ಬಸವರಾಜ, ಪಿಡಿಒ ಹುಸೇನ್ ಪೀರ್ , ಕಂದಾಯ ನಿರೀಕ್ಷಕ ಹನುಮಂತಪ್ಪ ಸೇರಿ ಸಾರ್ವಜನಿಕರು ಇದ್ದರು.

**

ಬಿಎಲ್ ವೈ19ಎಸ್ ಜಿಪಿ1:

ಸಿರುಗುಪ್ಪ ತಾಲೂಕಿನ ಎಚ್ .ಹೊಸಳ್ಳಿ ಗ್ರಾಮದಲ್ಲಿನಡೆದ ಪ್ರಜಾಸೇವೆ ಕಾರ್ಯಕ್ರಮವನ್ನು ತಹಸೀಲ್ದಾರ್ ಗೌಸಿಯಾ ಬೇಗಂ ಉದ್ಘಾಟಿಸಿದರು.

**

ಬಿಎಲ್ ವೈ19ಎಸ್ ಜಿಪಿ2:

ಸಿರುಗುಪ್ಪ ತಾಲೂಕಿನ ಎಚ್ .ಹೊಸಳ್ಳಿ ಗ್ರಾಮದಲ್ಲಿನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಮುಗಿಬಿದ್ದಿರುವುದು.