ವಿಕ ಸುದ್ದಿಲೋಕ ಮೈಸೂರು ಯಾರು ಏನೇ ಹೇಳಿದರೂ ಅದು ಮುಖ್ಯವಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿಸೋಮವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮುಖಂಡರ ಹೇಳಿಕೆಯ ಬಗ್ಗೆ ಗರಂ ಆಗಿ ಪ್ರತಿಕ್ರಿಯಿಸಿ, ‘‘ಯಾರು ಏನೇ ಹೇಳಲಿ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನಾದರು ಹೇಳಿದೆಯಾ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರಾ? ಯಾಕೆ ಪದೇಪದೆ ಅದನ್ನೆ ಮಾತನಾಡುತ್ತೀರಿ?,’’ ಎಂದು ಪ್ರಶ್ನಿಸಿದರು. ‘‘ಈ ಬಗ್ಗೆ ಜನ ಮಾತನಾಡುತ್ತಿಲ್ಲ. ಮಾಧ್ಯಮದವರೇ ಪದೇಪದೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳುವುದು ಮಾತ್ರವೇ ಮುಖ್ಯ. ಅದೇ ಅಂತಿಮ,’’ ಎಂದು ಹೇಳಿದರು. ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಿಯಿಸಿ, ‘‘ಬಿಹಾರ ಚುನಾವಣೆ ಬಳಿಕ ಸಂಪುಟ ಪುನರ್ ರಚನೆ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜತೆ ಚರ್ಚೆ ಮಾಡಲು ನ.15ಕ್ಕೆ ದಿಲ್ಲಿಗೆ ಹೋಗುತ್ತಿದ್ದೇನೆ. ಪುನರ್ ರಚನೆ ಬಗ್ಗೆ ಹೈಕಮಾಂಡ್ ಹೇಳುವ ರೀತಿ ನಡೆದುಕೊಳ್ಳುತ್ತೇನೆ,’’ ಎಂದರು.

